ದಾವಣಗೆರೆ: ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗಂಗೋತ್ರಿ (10) ತನುಶ್ರೀ (11) ಮೃತ ಬಾಲಕಿಯರು.
ಶಾಲೆ ಬಿಟ್ಟ ಬಳಿಕ ನಾಲ್ವರು ವಿದ್ಯಾರ್ಥಿಗಳು ಎಂದಿನಂತೆ ಮನೆಗೆ ತೆರಳುತ್ತಿದ್ದರು. ರಸ್ತೆ ಮಾರ್ಗದಲ್ಲಿ ಕೃಷಿ ಹೊಂಡ ನೋಡಿದ್ದಾರೆ. ಈ ಹೊಂಡದ ಮೇಲೆ ಆಟವಾಡಲು ತೆರಳಿದ್ದಾರೆ. ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತೋರ್ವ ಬಾಲಕಿ ಕಾಪಾಡಲು ಹೋಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.
ಮೃತ ಬಾಲಕಿಯರ ಜೊತೆ ಖುಷಿ ಎಂಬ ಬಾಲಕಿಯೂ ಹೊಂಡದಲ್ಲಿ ಬಿದ್ದಿದ್ದು, ಆಕೆಯನ್ನು ಜಮೀನಿನ ಮಾಲೀಕ ಕಾಪಾಡಿದ್ದಾನೆ. ಇವರೊಂದಿಗಿದ್ದ ಶೈಲಜಾ ಎಂಬ ಬಾಲಕಿ ಗಾಬರಿಯಿಂದ ಮನೆಗೆ ತೆರಳಿದ್ದಾಳೆ. ಮೃತಪಟ್ಟ ಬಾಲಕಿಯರ ಪೋಷಕರು ಕೂಲಿ ಕೆಲಸಕ್ಕೆ ಮಲೆನಾಡಿಗೆ ಗುಳೆ ಹೋಗಿದ್ದಾರೆ. ಮೃತ ಬಾಲಕಿಯರು ಸಂಬಂಧಿಕರ ಮನೆಯಲ್ಲಿ ಇದ್ದಾರೆ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



