ಚನ್ನಗಿರಿ: ಆಂಗ್ಲಭಾಷಾ ವ್ಯಾಮೋಹವು ಕನ್ನಡದ ಮೂಲ ಬೇರುಗಳನ್ನು ಸಡಿಲಿಸುವ ಕೆಲಸವನ್ನು ಮಾಡಿ,ಗ್ರಾಮೀಣ ಸಂಸ್ಕೃತಿಗೆ ಮಾರಕವಾಗಿದೆ. ಯುವಕರು ಕನ್ನಡದ ಕಾವಲುಗಾರರಾಗಿ ನೆಲ ಜಲ ಭಾಷೆಯ ಸಂರಕ್ಷಣೆಗಾಗಿ ಪಣತೊಡಬೇಕಾಗಿದೆ ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಯುವಕರಿಗೆ ಕರೆ ನೀಡಿದರು.
ಅವರು ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ಕನ್ನಡ ಜನಜಾಗೃತಿ ವೇದಿಕೆ ಸಂಘದವರು ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ
ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ನಾಡು ನುಡಿಗೆ ಪೂರಕವಾದ ಸಿನಿಮಾಗಳ ನಿರ್ಮಾಣ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿ ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ಅದರ ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು. ಜೊತೆಗೆ ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಳ್ಳುವತ್ತ ನಮ್ಮ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಇಡಬೇಕಾಗಿದೆ ಎಂದರು.
ಶಿಕ್ಷಕ ಎಂ.ಬಿ.ಜಯಣ್ಣ ಮಾತನಾಡಿ ಕನ್ನಡ ಕೇವಲ ಭಾಷೆ ಮಾತ್ರವಲ್ಲ,ಅದು ನಮ್ಮ ಬದುಕು ಕೂಡ.ಹಾಗಾಗಿ ಕನ್ನಡವನ್ನು ನಾವು ಬದುಕಾಗಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.ಉಪನ್ಯಾಸಕ ರವಿಕುಮಾರ್ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸುಂದರ ಭಾಷೆ.ಕನ್ನಡ ಭಾಷೆ ನಮ್ಮ ಬದುಕು.ಭಾಷೆ ಮತ್ತು ನಾಡಿನ ಪರಂಪರೆಯ ಶ್ರೀಮಂತಿಕೆಯನ್ನು ಯಾರೂ ಮರೆಯಬಾರದು ಎಂದರು.
ಹಿರಿಯ ರಂಗಕಲಾವಿದ ಎಸ್.ಎನ್.ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್.ಎಸ್.ನಾರಾಯಣ ಹೃದಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣೆಯಲ್ಲಿ 125 ಗ್ರಾಮಸ್ಥರು ತಪಾಸಣೆಗೊಳಪಟ್ಟರು. ಕಾರ್ಯಕ್ರಮದಲ್ಲಿ ಚಿರಡೋಣಿ ಗ್ರಾ.ಪಂ.ಅಧ್ಯಕ್ಷೆ ಡಿ.ಆರ್.ಜ್ಯೋತಿ, ಮಾಯಕೊಂಡ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಿ.ಜಿ.ಸಚಿನ್, ಕಾಂಗ್ರೆಸ್ ಯುವ ಘಟಕದ ಮುಖಂಡ ಬಿ.ಜಿ. ಅಮಿತ್, ಗ್ರಾ.ಪಂ.ಸದಸ್ಯರಾದ ಚಂದ್ರಮ್ಮ, ಶೇಖರಪ್ಪಗೌಡ,ಕಾಂತರಾಜ್, ಗೀತಾ, ಗೋಪಾಲರಾವ್, ನೀಲಮ್ಮ, ರೇಖಾ, ಸುಮ, ಕಮಲಮ್ಮ, ಲಕ್ಮಮ್ಮ, ಎಸ್ಡಿಎಂಸಿ ಅಧ್ಯಕ್ಷೆ ನರಸಮ್ಮ,ಬಿ.ಮಾರುತಿ ಮಲೇಬೆನ್ನೂರು ಪುರಸಭೆ ಸದಸ್ಯ ಕೆ.ಜಿ.ಲೋಕೇಶ್, ಜನಜಾಗೃತಿ ವೇದಿಕೆ ಕೆ.ಎಂ.ಮಂಜುನಾಥ್,ಸದಾಶಿವಪ್ಪ, ಶ್ರೀಕಾಂತ್, ಶಿವಕುಮಾರ್ ,ಪವನ್,ದರ್ಶನ್, ಗಣೇಶ್, ರುದ್ರೇಶ್ ಮತ್ತಿತರು ಇದ್ದರು.

 
		 
		 
		 
		 
		 
			
 
                                
                             
