ದಾವಣಗೆರೆ: ರಾಜ್ಯದಲ್ಲಿ ರೈತರ ಜಮೀನುಗಳಿಗೆ ವಕ್ಫ್ ಬೋರ್ಡ್ ನೋಟಿಸ್ ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ. ಜಿಲ್ಲಾ ಬಿಜೆಪಿ ಘಟಕದಿಂದ ಇಂದು ಬೃಹತ್ ಪ್ರಭಟನೆ ನಡೆಯಿತು. ಸರ್ಕಾರ ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
- ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
- ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಅಕ್ರಮ ಹೆಸರಲ್ಲಿ ಪ್ರತಿಭಟನೆ
- ಅರ್ಧ ಗಂಟೆಗೂ ಹೆಚ್ಚು ಹೊತ್ತು ರಸ್ತೆ ತಡೆದು ಪ್ರತಿಭಟನೆ
- ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಆಕ್ರೋಶ
- ಜಮೀರ್ ಒಬ್ಬ ಕ್ಯಾನ್ಸರ್, ಧರ್ಮಾಂಧ
- ಬಿಜೆಪಿ ಪಹಣಿ ಪರಿಶೀಲನಾ ಅಭಿಯಾನಕ್ಕೆ ಕರೆ
- ಪ್ರತಿಭಟನಾ ನಿರತ ಬಿಜೆಪಿ ನಾಯಕರ ಬಂಧನ
- ಪ್ರತಿಭಟನೆಯಲ್ಲಿ ಭಿನ್ನಮತ ಮರೆತು ಒಂದಾದ ಬಿಜೆಪಿ ನಾಯಕರು
ಜಿಲ್ಲಾ ಬಿಜೆಪಿ ಕಚೇರಿಯಿಂದ ಹೊರಟು ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಉಪ ವಿಭಾಗಾಧಿಕಾರಿ ಕಚೇರಿ ಸಮೀಪದ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ವು ಹೊತ್ತು ರಸ್ತೆ ತಡೆದು ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪ್ರತಿಭಟನ ನಿರತರನ್ನು ತಡೆದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್ ಸೇರಿದಂತೆ ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದರು.

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ನಿರತ ಎಲ್ಲರನ್ನು ಬಂಧಿಸಿ ಪೊಲೀಸ್ ಕವಾಯತ್ ಮೈದಾನಕ್ಕೆ ಕರೆದೊಯ್ದರು.
ಭಿನ್ನಮತ ಮರೆತು ಒಂದಾದ ಬಿಜೆಪಿ ನಾಯಕರು: ಈ ಪ್ರತಿಭಟನೆ ಮೂಲಕ ಜಿಲ್ಲಾ ಬಿಜೆಪಿ ನಾಯಕರು ಭಿನ್ನಮತ ಮರೆತು ಒಂದಾಗಿ ಪ್ರತಿಭಟನೆ ನಡೆಸಿದರು. ಕಳೆದ ಲೋಕಸಭಾ ಚುನಾವಣೆ ನಂತರ ಒಬ್ಬರಿಗೊಬ್ಬರು ಟೀಕೆ ಮಾಡುತ್ತಿದ್ದ ನಾಯಕರು ಇಂದು ಎಲ್ಲಾ ಭಿನ್ನಮತ ಮರೆತು ಒಂದಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ ಮಾತನಾಡಿ, ರಾಜ್ಯ ಸರ್ಕಾರ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವುದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ರೈತರ ಜಮಿನಿನ ಪಹಣಿಯ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸುವ ಮೂಲಕ ಆಸ್ತಿ ಕಬಳಿಸಲಾಗುತ್ತಿದೆ. ವಕ್ಪ್ ಬೋರ್ಡ್ ಗೆ ಆಸ್ತಿ ಕಳೆದುಕೊಂಡವರ ಜೊತೆ ನಿಲ್ಲುವ ಸಲುವಾಗಿ ಜಿಲ್ಲಾ ಬಿಜೆಪಿ ಪಹಣಿ ಪರಿಶೀಲನಾ ಅಭಿಯಾನ ಕೈಗೊಂಡಿದೆ. ಸಾರ್ವಜನಿಕರು ವಕ್ಫ್ ಬೋರ್ಡ್ನಿಂದ ಸಮಸ್ಯೆ ಹೊಂದಿದ್ದಲ್ಲಿ 98450-95092 ನಂಬರ್ಗೆ ಕರೆ ಮಾಡಿಬೇಕು. ಇಲ್ಲವೇ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು ಎಂದರು.
ವಕ್ ಸಚಿವ ಜಮೀರ್ ಅಹಮ್ಮದ್ ಕ್ಯಾನ್ಸರ್ ಇದ್ದಂತೆ, ಧರ್ಮಾಂಧತೆಯ ಮೂಲಕ ಹಿಂದು ಸಮಾಜ, ಮಠ, ಮಾನ್ಯಗಳು, ದೇವಸ್ಥಾನಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು.



