ಹರಿಹರ: ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಭತ್ತದ ಬೆಳೆಗೆ ಭದ್ರಾ ನಾಲೆಯ ನೀರಿನ ಅವಶ್ಯಕತೆ ಇದ್ದು, ಮೇ 25ರವರಿಗೆ ನೀರು ಹರಿಸಬೇಕು ಎಂದು ಹರಿಹರ ಕೊನೆ ಭಾಗದ ರೈತರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ
ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ರೈತರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಚ್ಚುಕಟ್ಟು ಪ್ರದೇಶದ ಕೊನೆಭಾಗದ
ಭತ್ತದ ಫಸಲಿಗೆ ನೀರಿನ ಅವಶ್ಯಕತೆ ಇದೆ. ಭಾನುವಳ್ಳಿ, ಕಮಲಾಪುರ ಸೇರಿದಂತೆ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ನೀರಿನ
ಅವಶ್ಯಕತೆ ಇದೆ. ಮೇ 17 ಕ್ಕೆ ಪ್ರಕಟಣೆಯಂತೆ ನೀರು ನಿಲುಗಡೆ ಮಾಡಿದರೆ, ಬೆಳೆದ ಬೆಳೆ ಕೈಗೆ ಬಾರದೆ,ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಇದಕ್ಕೆ ಪ್ರಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ನೀರಾವರಿ ಅಧಿಕಾರಿಗಳು ಮತ್ತು ಕಾಡಾ ಸದಸ್ಯರ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಭಾನುವಳ್ಳಿಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಹನುಮಂತಪ್ಪ, ರೈತರಾದ ಭಾಸ್ಕರ್ ರಾವ್ ಕ್ಯಾಂಪಿನ ಕರಿಬಸಪ್ಪ, ಭಾನುವಳ್ಳಿ ಹಣಚಿಕ್ಕಿ ನಾರಾಯಣಪ್ಪ, ಗ್ರಾ.ಪಂ. ಮಾಜಿ
ಸದಸ್ಯ ಕೆ ಪ್ರಶಾಂತ ಮತ್ತು ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರು ಇದ್ದರು.



