ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ ತಗ್ಗಿದೆ. ಇಂದು (ಆ.6)7531 ಕ್ಯೂಸೆಕ್ ಒಳ ಹರಿವಿದ್ದು, ಕಳೆದ ವಾರ 30 ಕ್ಯೂಸೆಕ್ ಇತ್ತು. ಇಂದಿನ ನೀರಿನ ಮಟ್ಟ 180’½” ಅಡಿ ಇದೆ. ಎಡ ದಂಡೆ ನಾಲೆಗೆ 180 ಕ್ಯೂಸೆಕ್ ಮತ್ತು ಬಲ ದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 120 ದಿನ ನೀರು ಹರಿಸಲು ಕಾಡಾ ಸಭೆ ನಿರ್ಧಾರ ಕೈಗೊಳ್ಳಲಾಗಿದೆ. ಡ್ಯಾಂ ಒಳವಿನ (7531ಕ್ಯೂಸೆಕ್) ಪ್ರಮಾಣದಲ್ಲಿಯೇ ಹೊರ ಹರಿವು ಇದೆ.
ಕಳೆದ ವರ್ಷ ಇದೇ ದಿನ 6882 ಕ್ಯೂಸೆಕ್ ಒಳಹರಿವು ಇತ್ತು. 165’0 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂ ಭರ್ತಿಯಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತ ಬೆಳೆಗಾರರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಸಹ ಉಕ್ಕಿ ಹರಿಯುತ್ತದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ಹಾಯ್ದು ಹೋಗುತ್ತದೆ. ಈ ಭಾಗದಲ್ಲಿ ಭತ್ತ ನಾಟಿ ಕಾರ್ಯ ನಡೆಯುತ್ತಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ನಾಲೆಗೆ ನೀರು ಬಿಟ್ಟಿದ್ದರಿಂದ ರೈತರು ಭತ್ತ ನಾಟಿಗೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಶಯವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮವಾಗಿ ಆಗಿದ್ದರಿಂದ ಕಳೆದ 30 ದಿನದಿಂದ ಭಾರೀ ಮಳೆಯಾಗಿ ಒಂದೇ ತಿಂಗಳಲ್ಲಿ ತುಂಬಿದೆ.
ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಆ. 6) ನೀರಿನ ಮಟ್ಟ 180’½ ಅಡಿಯಷ್ಟಿದೆ. ಒಳ ಹರಿವು 7531 ಕ್ಯೂಸೆಕ್ ನಷ್ಟಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 64.229 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 180’½ ಅಡಿ
- ಒಳ ಹರಿವು : 7531 ಕ್ಯೂಸೆಕ್
- ಹೊರ ಹರಿವು : 7531 ಕ್ಯೂಸೆಕ್
- ಎಡ ದಂಡೆ : 180 ಕ್ಯೂಸೆಕ್
- ಬಲ ದಂಡೆ : 2650 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 165 ಅಡಿ
- ಇದೇ ದಿನ ಕಳೆದ ವರ್ಷದ ಒಳಹರಿವು: 6882 ಕ್ಯೂಸೆಕ್