ದಾವಣಗೆರೆ: ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ನೀರಾವರಿ ಸಲಹಾ ಸಮಿತಿ (ಐಸಿಸಿ) ಪ್ರಕಟಿಸಿದ ನೀರು ಬಿಡುವ ವೇಳಾ ಪಟ್ಟಿ ಅವೈಜ್ಞಾನಿಕವಾಗಿದೆ. ಎಡದಂಡೆಗೆ 70 ದಿನ ನೀರು.., ಬಲದಂಡೆಗೆ ಕೇವಲ 53 ದಿನ…!!! ನೀರು ಬಿಡಲು ತೀರ್ಮಾನಿಸಿದೆ. ಇದ್ಯಾವ ನ್ಯಾಯ ಸ್ವಾಮಿ…? ಈ ಅವೈಜ್ಞಾನಿಕ ವೇಳಾಪಟ್ಟಿ ವಾಪಸ್ ಪಡೆದು ಪ್ರತಿ ತಿಂಗಳು 20 ದಿನ ನೀರು ಬಿಡಿ ಎಂದು ದಾವಣಗೆರೆಯಲ್ಲಿಂದು ರೈತರು ಬೃಹತ್ ಪ್ರತಿಭಟನೆ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ಈ ಕೂಡಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯನ್ನು ರದ್ದುಗೊಳಿಸಿ, ಹೊಸ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಮತ್ತು ದಾವಣಗೆರೆ, ಹರಿಹರ, ಮಲೇಬೆನ್ನೂರು ಭಾಗದ ರೈತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪಿ. ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಎಸಿ ಕಚೇರಿ ತಲುಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭದ್ರಾ ಸೂಪರಿಂಡೆಂಟ್ ಇಂಜಿನಿಯರ್ ಸುಜಾತಾ ಅವರು ಹೊಸ ವೇಳಾಪಟ್ಟಿ ಘೋಷಣೆ ಮಾಡಿದ್ದಾರೆ. ಅವರು ಮನಸ್ಸಿಗೆ ಬಂದಂತೆ ನೀರು ವೇಳಾಪಟ್ಟಿಯನ್ನು ಬದಲಾಯಿಸಿದ್ದಾರೆ. ಎಡದಂಡೆ ರೈತರಿಗೆ ಒಟ್ಟು 70 ದಿನ ನೀರು ಕೊಟ್ಟಿದ್ದಾರೆ. ಆದರೆ, ದಾವಣಗೆರೆ ಜಿಲ್ಲೆಯ ಬಲ ದಂಡೆ ರೈತರಿಗೆ ಕೇವಲ 53 ದಿನ ನೀರು ಹರಿಸುವುದಾಗಿ ಹೇಳಿದ್ದಾರೆ. ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ನೀರು ತಲುಪದಿದ್ದರೆ ಬೋರ್ ವೆಲ್ ಗಳು ಸಂಪೂರ್ಣ ನಿಂತು ಹೋಗಲಿವೆ. ಇದರಿಂದ ಅಡಿಕೆ , ತೆಂಗು ತೋಟಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆಗಬಹುದು. ಭದ್ರಾ ಜಲಾಶಯ ಜಿಲ್ಲೆಯ ಜೀವನಾಡಿಯಾಗಿದ್ದು, ನೀರು ಹರಿಸಬೇಕು ಎಂದು ಒತ್ತಾಯಿಸಿದರು.
- ರೈತರ ಮುಖ್ಯ ಬೇಡಿಕೆ ಏನು..?
- ಭದ್ರಾ ನೀರಾವರಿ ಸಲಹಾ ಸಮಿತಿ ವೇಳಾ ಪಟ್ಟಿಯನ್ನು ತಕ್ಷಣ ರದ್ದುಗೊಳಿಸಬೇಕು
- ಪ್ರಸ್ತುತ ಡ್ಯಾಂನಲ್ಲಿ 151 ಅಡಿ ನೀರಿದ್ದು, ಡೆಡ್ ಸ್ಟೋರೇಜ್ 13.38 ಟಿಎಂಸಿ ತೆಗೆದು, 21.54 ಟಿಎಂಸಿ ನೀರು ಬಳಸಬಹುದು
- ಪ್ರತಿ ದಿನ 0.29 ಟಿಎಂಸಿಯಂತೆ 74 ದಿನ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಹರಿಸಿ
- ಫೆಬ್ರವರಿ 20 ದಿನ , ಮಾರ್ಚ್ ತಿಂಗಳಲ್ಲಿ 20 ಮತ್ತು ಎಪ್ರಿಲ್ ತಿಂಗಳಲ್ಲಿ 20 ದಿನ ನೀರು ಹರಿಸಬೇಕು
- ಶೇ. 70 ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿರುವ ದಾವಣಗೆರೆ ಜಿಲ್ಲೆಯಲ್ಲಿಯೇ ಮುಂದಿನ ಐಸಿಸಿ ಸಭೆ ನಡೆಸಬೇಕು.
- ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆಯ ಟಿವಿ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು
- ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ
- 1.91 ಟಿ.ಎಂ.ಸಿ ನೀರು ಅವಿಯಾಗುತ್ತದೆ ಎಂಬ ಅಧಿಕಾರಿಗಳ ಲೆಕ್ಕ ಸರಿಯಲ್ಲ
- ಹಿರೇಕೋಗಲೂರು ಬಳಿ ಮತ್ತು ಬೆಳ್ಳಿಗನೂಡು ಬಳಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೂಪರ್ ಪ್ಯಾಸೇಜ್ ಹೊಡೆದು ನೀರು ಪೋಲಾಗುವುದು ತಪ್ಪಿಸಿ
- ನೀರು ಕೊನೆ ಭಾಗಕ್ಕೆ ತಲುಪುವಂತೆ ನೋಡಿಕೊಳ್ಳಬೇಕು
ಪ್ರತಿಭಟನಾ ಮೆರವಣಿಗೆಯಲ್ಲಿ ಹರಿಹರ ಶಾಸಕಬಿ. ಪಿ. ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಎಂ. ಸತೀಶ್ ಕೊಳೇನಹಳ್ಳಿ, ಕೆ. ಬಿ. ಕೊಟ್ರೇಶ್, ಬಿಜೆಪಿ ಮುಖಂಡ ಧನಂಜಯ ಕಡ್ಲೆಬಾಳ್, ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್, ಎಲ್. ಎನ್. ಕಲ್ಲೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಬಲ್ಲೂರು ಬಸವರಾಜ , ಶಾಗಲೆ ದೇವೇಂದ್ರಪ್ಪ , ಲೋಕಿಕೆರೆ ನಾಗರಾಜ್, ಬೇತೂರು ಸಂಗಪ್ಪ, ಆರನೇ ಕಲ್ಲು ವಿಜಯಕುಮಾರ, ಮಹಾನಗರ ಪಾಲಿಕೆ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಅವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಪ್ರದೀಪ್, ಶಾಗಲೆ ಜಗದೀಶಗೌಡ್ರು, ಗೋಪನಾಳ್ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ್, ಬಾತಿ ವಿರೇಶ್ ದೊಗ್ಗಳ್ಳಿ, ಅಣಬೇರು ಶಿವಪ್ರಕಾಶ್ ಮತ್ತಿತರರು ಇದ್ದರು.