ದಾವಣಗೆರೆ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಎನ್ಎಫ್ಎಪಿ- ಬಂಬೂ ಮಿಷನ್ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿ ಮಾಡಲು ಪ್ರತಿ ಎಕರೆಗೆ ಪ್ರತಿ ವರ್ಷ 18,000 ರೂ. ಗಳಂತೆ 03 ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡದ ರೈತರು ಜಮೀನು ಹೊಂದಿರುವ ಕುರಿತು ಆರ್.ಟಿ.ಸಿ/ ಅರಣ್ಯ ಹಕ್ಕು ಅಧಿನಿಯಮದಡಿ ಪಡೆದಿರುವ ಹಕ್ಕು ಪತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಹ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿಯಲ್ಲಿ ಫೆ.19 ರ ಒಳಗಾಗಿ ಸಂಬಂಧಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪರಿಶೀಲನೆಯೊಂದಿಗೆ ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಭಾರತ ಸಂವಿಧಾನ ಅನುಚ್ಛೇಧ 275(1)ರಡಿ 2021-22ನೇ ಸಾಲಿನ ಬಿದಿರು ಕೃಷಿ ಅನುಷ್ಟಾನಗೊಳಿಸಲು ಅನುಮೋದನೆ ನೀಡಿರುತ್ತಾರೆ. ಅದರಂತೆ ಜಿಲ್ಲೆಯ ಪರಿಶಿಷ್ಟ ಪಂಗಡದ ಅರ್ಹ ಮತ್ತು ಆಸಕ್ತ ರೈತರು ಅರ್ಜಿಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ-45, ಜಿಲ್ಲಾಡಳಿತ ಭವನ, ದಾವಣಗೆರೆ ಇವರಿಗೆ ಅಥವಾ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ದಾವಣಗೆರೆ, ಚನ್ನಗಿರಿ, ಜಗಳೂರು / ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ, ಹರಿಹರ ಮತ್ತು ಹೊನ್ನಾಳಿ ಇಲ್ಲಿ ಫೆ.19ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08192-263546ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



