ದಾವಣಗೆರೆ: ಯಾಂತ್ರಿಕೃತ ಭತ್ತ ನಾಟಿ ಮಾಡಲು ಸಸಿ ಮಡಿ ತಯಾರಿಕೆ ಮಾಡುವುದೇ ಒಂದು ಸವಾಲು ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ. ಓ ಅಭಿಪ್ರಾಯಪಟ್ಟರು.
ಐಸಿಎಆರ್ ತರಳಬಾಳ ಕೃಷಿ ವಿಜ್ಞಾನ ಕೇಂದ್ರದಿಂದ ದಾವಣಗೆರೆ ತಾಲೂಕಿನ ಹಳೆಬಾತಿ ಗ್ರಾಮದಲ್ಲಿ ಭತ್ತದ ಬೆಳೆಯಲ್ಲಿ ಸಮಗ್ರ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ಯಾಂತ್ರಿಕೃತ ಸಸಿ ಮಡಿಗೆ ಭೇಟಿ ನೀಡಿ ಮಾತನಾಡಿದರು. ಭತ್ತದ ಸಸಿ ಮಡಿಯಲ್ಲಿ ಕಾಂಡ ಕೊರಕದ ಬಾಧೆ ಕಂಡು ಬಂದಲ್ಲಿ ಕ್ಲೋರೋಫೈರಿಪಾಸ್ ಒಂದು ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದರು.
ಸಾಮಾನ್ಯ ಪದ್ಧತಿಗೆ ಹೋಲಿಸಿದರೆ ಯಾಂತ್ರಿಕೃತ ನಾಟಿ ಪದ್ಧತಿಯಲ್ಲಿ ಎಕರೆಗೆ 10 ಕೆಜಿ ಬೀಜ ಬಳಕೆಯಾಗುತ್ತದೆ. ಸುಮಾರು ಹತ್ತು ಕೆಜಿ ಬೀಜವನ್ನು ಉಳಿತಾಯ ಮಾಡಬಹುದು. ಬಿತ್ತನೆ ಸಂದರ್ಭದಲ್ಲಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿರುವುದರಿಂದ ಸಸಿ ಮಾಡಿ ಉತ್ತಮವಾಗಿದೆ ಎಂದು ಪ್ರಗತಿಪರ ಕೃಷಿಕ ನಾಗರಾಜ ಅಭಿಪ್ರಾಯ ಪಟ್ಟರು.
ಯಾಂತ್ರಿಕೃತ ನಾಟಿ ಪದ್ಧತಿ ಕೂಲಿ ಆಳುಗಳ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರವಾಗುತ್ತದೆ ಎಂದು ಕೇಂದ್ರದ ಮುಖ್ಯಸ್ಥರಾದ ಡಾ. ಟಿ ಎನ್ ದೇವರಾಜ್ ಅಭಿಪ್ರಾಯಪಟ್ಟರು. ಕ್ಷೇತ್ರ ಭೇಟಿ ಸಂದರ್ಭದಲ್ಲಿ ಪ್ರಗತಿಪರ ರೈತ ಮಲ್ಲಿಕಾರ್ಜುನ, ಶಂಕರ್ ಮತ್ತು ಹರೀಶ್ ಭಾಗವಹಿಸಿದ್ದರು.



