Connect with us

Dvgsuddi Kannada | online news portal | Kannada news online

ದಾವಣಗೆರೆ: ಕೃಷಿ ಇಲಾಖೆಯಿಂದ ರಾಗಿ ಕ್ಷೇತ್ರೋತ್ಸವ

ದಾವಣಗೆರೆ

ದಾವಣಗೆರೆ: ಕೃಷಿ ಇಲಾಖೆಯಿಂದ ರಾಗಿ ಕ್ಷೇತ್ರೋತ್ಸವ

ದಾವಣಗೆರೆ: ಕೃಷಿ ಇಲಾಖೆ ದಾವಣಗೆರೆ ವತಿಯಿಂದ ಅರಸಾಪುರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಗತಿಪರ ರೈತನಾದ ಮಂಜನಾಯ್ಕ ಬಿನ್ ರುದ್ರನಾಯ್ಕ ರವರ ಕ್ಷೇತ್ರದಲ್ಲಿ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಶಾಸಕ ರವೀಂದ್ರನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ದೇಶಕ್ಕೆ ಅನ್ನ ಕೊಡುವಂಥವರು ಹಾಗಾಗಿ ವಿಜ್ಞಾನಿಗಳ ಸಲಹೆಯಂತೆ ಕೊನೆ ಭಾಗದ ರೈತರಾದ ನೀವು ಒಂದೇ ಬೆಳೆಗೆ ಅಂಟಿಕೊಳ್ಳದೆ, ಬೆಳೆ ಪರಿವರ್ತನೆ ಮಾಡುವುದು ಉತ್ತಮ. ಇಲಾಖೆಯವರು ಸಹ ಇದಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ಭತ್ತದ ಬೆಳೆಯನ್ನು ಹೊರತುಪಡಿಸಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ರೈತರಿಗೆ ತರಬೇತಿ ನೀಡುವುದರ ಜೊತೆಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ರಾಜ್ಯದ ಬೇರೆ ಬೇರೆ ಭಾಗದ ರೈತರು ಇಲ್ಲಿಗೆ ಬಂದು ನೋಡುವ ಹಾಗೆ ರಾಗಿ, ಜೋಳ ಹಾಗೂ ಇನ್ನಿತರೆ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬೇಕು ಎಂದು ತಮ್ಮ ಮನದಾಳದ ಮಾತನ್ನು ರೈತರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕಗಳನ್ನು ಮತ್ತು ಸಾವಯವ ಗೊಬ್ಬರ, ದ್ರವರೂಪದ ಗೊಬ್ಬರ, ಕೀಟನಾಶಕ ಮತ್ತು ರೋಗನಾಶಕಗಳನ್ನು ವಿತರಿಸಿದರು.

ರಾಗಿ ಬೆಳೆಗಾರರ ಅಪೇಕ್ಷೆಯಂತೆ ಬೆಂಬಲ ಬೆಲೆಯಡಿ ಪ್ರತಿ ರೈತರಿಗೆ 20 ಕ್ವಿಂಟಾಲ್ ಬದಲಿಗೆ 50 ಕ್ವಿಂಟಾಲ್ ವರೆಗೆ ಖರೀದಿ ಕೇಂದ್ರಕ್ಕೆ ಬೀಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ತಾಂತ್ರಿಕ ಉಪನ್ಯಾಸ ನೀಡಿ, ಈ ಭಾಗದ ರೈತರು ಭತ್ತದ ಬೆಳೆಯ ಬದಲಾಗಿ ಸುಮಾರು 250 ಎಕರೆಯಷ್ಟು ಕ್ಷೇತ್ರವನ್ನು ರಾಗಿ ಬೆಳೆಯಾಗಿ ಪರಿವರ್ತನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ರಾಗಿ ಬೆಳೆಗೆ ಸಂಬಂಧಿಸಿದಂತೆ ನೀರು ನಿರ್ವಹಣೆ, ಸಮಗ್ರ ಪೆÇೀಷಕಾಂಶ, ರೋಗ-ಕೀಟ ನಿರ್ವಹಣೆ ಮತ್ತು ಖರ್ಚು ಕಡಿಮೆ ಮಾಡುವುದರ ಕುರಿತು ತಾಂತ್ರಿಕ ಮಾಹಿತಿ ನೀಡಿದರು.

ಉಪ ಕೃಷಿ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆಯೂ ಶಾಸಕ ರವೀಂದ್ರನಾಥ್ ಆಶಯದಂತೆ ಸರ್ಕಾರದ ಯೋಜನೆಗಳನ್ನು ಮತ್ತು ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಂದು ವಿತರಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಗಿ ಬೆಳೆಯುವಂತಹ ರೈತರನ್ನು ಪ್ರೋತ್ಸಾಹಿಸಲು ಅಗತ್ಯವಿರುವ ಪರಿಕರಗಳ ವಿತರಣೆ ಮಾಡುವುದರ ಜೊತೆ ಲಭ್ಯವಿರುವ ನೀರನ್ನು ಅಗತ್ಯಕ್ಕನುಗುಣವಾಗಿ ಬೆಳೆಗಳಿಗೆ ನೀಡಲು ಅವಶ್ಯಕತೆಯಿರುವ ತುಂತುರು ನೀರಾವರಿ ಘಟಕಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕಾರ್ಯಕ್ರಮವನ್ನು ಈ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಮಂಜುಳಾಬಾಯಿ ಸೇವ್ಯಾನಾಯ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಿಬಾಯಿ ಹನುಮಂತನಾಯ್ಕ, ಸತ್ಯಬಾಬು, ರೂಪ ಧನ್ಯಕುಮಾರ್, ಮಂಜಿಬಾಯಿ ಪಾಪಾನಾಯ್ಕ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ. ಹೆಚ್. ರವಿಕುಮಾರ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಹೆಚ್.ಕೆ., ಕೃಷಿ ಅಧಿಕಾರಿಗಳಾದ ದಿವ್ಯಾ ಜಿ.ಎಮ್., ಲಾವಣ್ಯ ಟಿ.ಎನ್., ಸಹಾಯಕ ಕೃಷಿ ಅಧಿಕಾರಿ ವಸಂತ್ ಕುಮಾರ್ ಕೆ., ಆತ್ಮ ಸಿಬ್ಬಂದಿ ವೆಂಕಟೇಶ್ ಬಿ.ಎಸ್., ಗ್ರಾಮದ ರೈತರು ಭಾಗವಹಿಸಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top