ದಾವಣಗೆರೆ: ಮುಂಬೈ ಮೂಲದ ಕಂಪನಿ ಜಿಲ್ಲೆಯ ರೈತನಿಗೆ ಕಳಪೆ ಟಾರ್ಪಲಿನ್ ಪೂರೈಸಿತ್ತು. ಈ ಬಗ್ಗೆ ರೈತ ಡೀಲರ್ ವಿರುದ್ದ ಗಲಾಟೆ ಮಾಡಿದ್ದಕ್ಕೆ ಸ್ಥಳ ಪರಿಶೀಲಿಸಿದ ಮಾರಾಟಗಾರರು ರೈತನದೇ ತಪ್ಪು ಎಂದು ವರದಿ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ರೈತ, ಜಿಲ್ಲಾ ಗ್ರಾಹಕ ನ್ಯಾಯಾಲಯ (District Consumer Court) ಮೆಟ್ಟಿಲೇರಿದ್ದನು. ವಿಚಾರಣೆ ನಡೆಸಿದ ನ್ಯಾಯಾಲಯ, ಕಳಪೆ ಗುಣಮಟ್ಟದ ಟಾರ್ಪಲಿನ್ ಪೂರೈಕೆ ಮಾಡಿದ ಕಂಪನಿ, ರೈತ ನೀಡಿದ 1 ಲಕ್ಷಕ್ಕೆ ಶೇ 18ರ ಬಡ್ಡಿ ಮತ್ತು ದಂಡ ಸಹಿತ ಹಣ ಮರಳಿಸುವಂತೆ ಆದೇಶಿಸಿದೆ.
- ರೈತನಿಗೆ ಕಳಪೆ ಟಾರ್ಪಲಿನ್ ಪೂರೈಸಿದ ಮುಂಬೈ ಮೂಲದ ಕಂಪನಿ
- ಆಲೂರು ಗ್ರಾಮದ ರೈತ ನಟರಾಜ್ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು
- ಖರೀದಿ ದಿನಾಂಕದಿಂದ ದಂಡ ಸಹಿತ 1 ಲಕ್ಷ ಹಣ ಮರಳಿಸುವಂತೆ ಆದೇಶಿಸಿದೆ.
- ರೈತನಿಗೆ ಮಾನಸಿಕ ಕಿರುಕುಳಕ್ಕೆ 20 ಸಾವಿರ ಹಾಗೂ ನ್ಯಾಯಾಲಯದ ವೆಚ್ಚ 5 ಸಾವಿರ ಭರಿಸುವಂತೆಯೂ ಆದೇಶ
ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ರೈತ ನಟರಾಜ್ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಮುಂಬೈ ಮೂಲದ ಕಂಪನಿಯಿಂದ 1ಲಕ್ಷಕ್ಕೆ 2023ರ ಮೇ 26ರಂದು ಟಾರ್ಪಲಿನ್ ಖರೀದಿಸಿದ್ದರು. ಆ ಟಾರ್ಪಲಿನ್ ಕೃಷಿ ಹೊಂಡಕ್ಕೆ ಹಾಕಿದ ಕೆಲ ದಿನಗಳಲ್ಲಿ ಹಾಳಾಗಿತ್ತು. ಈ ಕುರಿತು ನಟರಾಜ್ ಕಂಪನಿಯ ಡೀಲರ್ಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಮಾರಾಟಗಾರರು ರೈತನದ್ದೇ ತಪ್ಪು ಎಂದು ಆರೋಪಿಸಿದ್ದರು.
ಇದರಿಂದ ಅಸಮಾಧಾನಗೊಂಡ ನಟರಾಜ, ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಜರಾಜನ್ ಹಾಗೂ ಗೀನಾ ಬಿ.ಯು ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಕಳಪೆ ಗುಣಮಟ್ಟದ ಟಾರ್ಪಲಿನ್ ನೀಡಿ, ಗ್ಯಾರಂಟಿ ಕೊಡದ ಕಂಪನಿಯು ಖರೀದಿ ದಿನಾಂಕದಿಂದ ದಂಡ ಸಹಿತ 1 ಲಕ್ಷ ಹಣ ಮರಳಿಸುವಂತೆ ಆದೇಶಿಸಿದೆ. ಇದಲ್ಲದೆ, ರೈತನಿಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ 20 ಸಾವಿರ ಹಾಗೂ ನ್ಯಾಯಾಲಯದ ವೆಚ್ಚ 5 ಸಾವಿರ ಭರಿಸುವಂತೆಯೂ ಆದೇಶದಲ್ಲಿ ಸೂಚಿಸಿದೆ.



