ಸಿರಿಗೆರೆ: ಯಾವುದೋ ರೆಸಾರ್ಟ್ , ಹೊಟೇಲ್ ನಲ್ಲಿ ಸಭೆ ಮಾಡಿ ಎಷ್ಟೇ ಸುಳ್ಳು ಆರೋಪ, ಷಡ್ಯಂತ್ರ, ಪಿತೂರಿ ನಡೆಸಿದರೂ ನನ್ನ ಹಾಗೂ ಶಿಷ್ಯರ ನಡುವಿನ ಸಂಬಂಧ ಹಾಳುಗೆಡವಲು ಸಾಧ್ಯವಿಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದರು.
ಶ್ರೀ ಬೆಂಬಲಿಸಿ ಭರಮಸಾಗರ ಹೋಬಳಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಬೃಹತ್ ಬೈಕ್ ರ್ಯಾಲಿ ನಡೆಸಿ ಸಿರಿಗೆರೆ ಮಠಕ್ಕೆ ಆಗಮಿಸಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಠದ ನಿಜವಾದ ಸದ್ಭಕ್ತರು ಹತ್ತಿರವಾಗುತ್ತಿದ್ದಾರೆ. ಆದರೆ, ಶ್ರೀಮಂತರು, ಬಂಡವಾಳಶಾಹಿಗಳು ಮಠದಿಂದ ದೂರವಾಗುತ್ತಿದ್ದಾರೆ. ಮಠ, ಶಿಷ್ಯರ ನಡುವಿನ ಸಂಬಂಧ ಮುಂದುವರಿದುಕೊಂಡು ಹೋಗಬೇಕು. ನಮ್ಮಲ್ಲಿ ಒಗ್ಗಟ್ಟಿದ್ದರೆ ಯಾವುದೇ ಪಿತೂರಿ, ಷಡ್ಯಂತ್ರ ಫಲಿಸಲ್ಲ ಎಂದು ತಿಳಿಸಿದರು.
ನಾನು ಮಠದ ಹಣ, ಆಸ್ತಿ ಕಬಳಿಸಿಲ್ಲ. ದೊಡ್ಡ ಗುರುಗಳು ಇದ್ದಾಗ ಯಾರದ್ದೋ ಹೆಸರಿನಲ್ಲಿ ಅಕೌಂಟ್ ಗಳು ಇದ್ದವು. ಆ ಅಕೌಂಟ್ ಗಳೆಲ್ಲವನ್ನೂ ಸೇರಿಸಿದಾಗ ಹತ್ತು ಲಕ್ಷ ರೂಪಾಯಿ ಇತ್ತು. ಯಾವುದೇ ಹಗರಣ, ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ. ಭಕ್ತರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಎಷ್ಟೇ ಷಡ್ಯಂತ್ರ, ಪಿತೂರಿ ನಡೆಸಿದರೂ ನನ್ನ ಹಾಗೂ ಶಿಷ್ಯರ ನಡುವಿನ ಸಂಬಂಧ ಹಾಳುಗೆಡವಲು ಸಾಧ್ಯವಿಲ್ಲ. ಆರೋಪಗಳು ಬಂದಷ್ಟು ನಮ್ಮ ನಿಮ್ಮ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎಂದರು.
- ಪ್ರಮುಖ ಅಂಶ
- ಎಷ್ಟೇ ಷಡ್ಯಂತ್ರ, ಪಿತೂರಿ ನಡೆಸಿದರೂ ಗುರು-ಶಿಷ್ಯರ ನಡುವಿನ ಸಂಬಂಧ ಹಾಳುಗೆಡವಲು ಸಾಧ್ಯವಿಲ್ಲ
- ಯಾವುದೇ ಹಗರಣ, ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ
- ನಮ್ಮಲ್ಲಿ ಒಗ್ಗಟ್ಟಿದ್ದರೆ ಯಾವುದೇ ಪಿತೂರಿ, ಷಡ್ಯಂತ್ರ ಫಲಿಸಲ್ಲ
- ಭಕ್ತರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು
- ಕೇಸ್ ಇತ್ಯರ್ಥದ ಬಳಿಕ ಉತ್ತರಾಧಿಕಾರಿ ನೇಮಕ
- ಬೈಲಾ ತಿದ್ದುಪಡಿ ಮಾಡಿಲ್ಲ, ಹೊಸದಾಗಿ ಟ್ರಸ್ಟ್ ಡೀಡ್ ಮಾಡಿಲ್ಲ.
- ಕೋರ್ಟ್ ಕೇಸ್ ಬಗೆಹರಿದ ಬಳಿಕ ಭಕ್ತರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ
- ಭರಮಸಾಗರ ಸದ್ಭಕ್ತರು ಬೈಕ್ ರ್ಯಾಲಿ ನಡೆಸಿ ಶ್ರೀಗಳಿಗೆ ಬೆಂಬಲ
ಉತ್ತರಾಧಿಕಾರಿ ನೇಮಕ ಸಂಬಂಧ ಚಿತ್ರದುರ್ಗ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿಯಲ್ಲಿ ಮಠದ ಟ್ರಸ್ಟ್ ಡೀಡ್ ಬಗ್ಗೆಯೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದು ಮುಗಿಯುವವರೆಗೆ ಉತ್ತರಾಧಿಕಾರಿ ನೇಮಕ ಮಾಡಲು ಸಾಧ್ಯವಾಗುವುದಿಲ್ಲ. ಕೇಸ್ ಬಗೆಹರಿದ ಬಳಿಕ ಭಕ್ತರ ಸಮ್ಮುಖದಲ್ಲಿ ತೀರ್ಮಾನವಾಗಲಿ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ತಮ್ಮದೇನೂ ವಿರೋಧ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇರುವ ಕಾರಣಕ್ಕೆ ಮುಂದೂಡಲಾಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬೈಲಾ ತಿದ್ದುಪಡಿ ಮಾಡಿಲ್ಲ, ಹೊಸದಾಗಿ ಟ್ರಸ್ಟ್ ಡೀಡ್ ಮಾಡಿಲ್ಲ. ಹಿರಿಯ ಗುರುಗಳು ಮಾಡಿದಂತೆಯೇ ನಡೆದುಕೊಂಡು ಹೋಗುತ್ತಿದೆ. ಬೈಲಾ ಅನ್ನೂ ಸಹ ಹಿರಿಯ ಗುರುಗಳೇ ಮಾಡಿದ್ದರು. ಅದರಂತೆ ಮುಂದುವರಿಸಿಕೊಂಡು ಬಂದಿದ್ದೇವೆ. ಭಕ್ತರು ಯಾವುದೇ ಕಾರಣಕ್ಕೂ ಸಿಟ್ಟಿಗೇಳಬಾರದು. ಈ ಹಿಂದೆ ಇದ್ದ ಕಾನೂನೇ ಬೇರೆ, ಈಗಿನ ಕಾನೂನೇ ಬೇರೆ. ತಾಳ್ಮೆ ವಹಿಸಿ. ಶಾಂತಿಯುತವಾಗಿ ವರ್ತಿಸಿ. ಯಾರ ಬಗ್ಗೆಯೂ ಲಘುವಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದರು.
ನಿಮ್ಮ ಬೆಂಬಲ ನೋಡಿ ಸಂತಸವಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ನೀಡುತ್ತಿರುವುದನ್ನು ನೋಡಿದರೆ ನೀವು ತಮ್ಮ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಈ ಪ್ರೀತಿ, ಗೌರವ ಹೀಗೆಯೇ ಮುಂದುವರಿಯಲಿ ಎಂದು ಹೇಳಿದರು. ನೀವು ನಮಗೆ ಆದೇಶ ಕೊಡಿ. ಮಠದ ವಿರೋಧಿಗಳಿಗೆ ಉತ್ತರ ನೀಡುತ್ತೇವೆ ಎಂದು ಪಟ್ಟುಹಿಡಿದರು. ಈ ವೇಳೆ ಗುರುಗಳು ಎಲ್ಲರನ್ನೂ ಸಮಾಧಾನಪಡಿಸಿದರು.