ದಾವಣಗೆರೆ : ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿಗೆ ಹೊಸದಾಗಿ 4 ರೈತ ಉತ್ಪಾದಕ ಸಂಸ್ಥೆಗಳ ರಚನೆ ಮಾಡಲು ಗುರಿ ಹೊಂದಲಾಗಿದೆ. ದಾವಣಗೆರೆ ತಾಲ್ಲೂಕು ತೆಂಗು, ಹರಿಹರ ತಾಲ್ಲೂಕು ವೀಳ್ಯೆದೆಲೆ, ಹೊನ್ನಾಳಿ ತಾಲ್ಲೂಕು ಬಾಳೆ ಮತ್ತು ತರಕಾರಿ, ನ್ಯಾಮತಿ ತಾಲ್ಲೂಕಿನಲ್ಲಿ ಶೇಂಗಾ ಬೆಳೆಯಲ್ಲಿ ಮೌಲ್ಯವರ್ಧನೆಗಾಗಿ ರೈತ ಉತ್ಪಾದಕ ಸಂಸ್ಥೆಯನ್ನು ರಚಿಸುವ ನಿರ್ಣಯಿಸಲಾಯಿತು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸುವಂತೆ ರೈತರಿಗೆ ಹೆಚ್ಚಿನ ಪ್ರಚಾರ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಕುರಿತಂತೆ ಸಿದ್ಧಪಡಿಸಲಾದ ಕರಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಕೊನೆಯ ದಿನಾಂಕದೊಳಗೆ ರೈತರು ತಮ್ಮ ಬೆಳೆ ವಿಮೆಯನ್ನು ನೋಂದಣೆ ಮಾಡಿಕೊಳ್ಳಲು ಕೋರಿದ ಅವರು 2019-20ನೇ ಸಾಲಿನಲ್ಲಿ 25734 ರೈತರು ರೂ. 385.98 ಲಕ್ಷ ಪ್ರೀಮಿಯಂನ್ನು ಪಾವತಿಸಿ ನೋಂದಣಿ ಮಾಡಿಕೊಂಡಿದ್ದು, ರೂ. 1536.14 ಲಕ್ಷ ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾವಣೆ ಮಾಡಿರುವುದಾಗಿ ತಿಳಿಸಿದರು.
ತೋಟಗಾರಿಕೆ ಬೆಳೆಗಳಲ್ಲಿ 6563 ರೈತರು ಬೆಳೆ ವಿಮೆ ಮಾಡಿಸಿದ್ದು, ಒಟ್ಟು ರೂ.346.93 ಲಕ್ಷ ಪ್ರೀಮಿಯಂ ಮೊತ್ತ ಪಾವತಿಸಿದ್ದು, ರೂ.1257.42 ಲಕ್ಷ ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು. ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ಇತರೆ ಅಧಿಕಾರಿಗಳು ಇದ್ದರು.



