ದಾವಣಗೆರೆ: ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯು 29ಕ್ಕೆ ಮಧ್ಯಕರ್ನಾಟಕದ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುತ್ತದೆ. ಬಾತಿ ಗ್ರಾಮದಲ್ಲಿ ಸ್ವಾಗತಿಸಲು ಸಿದ್ಧತೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸುವ ಪಾದಯಾತ್ರೆಯನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿ, ಅಂದು ಸಂಜೆ 4 ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬಹಿರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ಹೆಚ್.ಎಸ್. ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದವು. ಆದರೆ, ಈಗ ಎಲ್ಲಾ ಎಲ್ಲಾ ಗೊಂದಗಳು ನಿವಾರಣೆಯಾಗಿದ್ದು, ನಮ್ಮ ಸಮಾಜ ಒಗ್ಗಟ್ಟಾಗಿದೆ. ಎರಡೂ ಪೀಠಗಳ ಗುರುಗಳ ನೇತೃತ್ವದಲ್ಲಿ ನಮ್ಮ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುತ್ತೇವೆ. ಎಲ್ಲಾ ಸಮಾಜದಲ್ಲಿಯೂ ಪಟ್ಟಭದ್ರರೂ ಇರುತ್ತಾರೆ. ಅವರು ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಸಮಾಜಕ್ಕೆ ಎರಡು ಪೀಠ, ಇಬ್ಬರು ಗುರುಗಳಿದ್ದು ಸಮಾಜ ಎರಡು ದಿಕ್ಕುಗಳಲ್ಲಿ ಹೊರಟಿದೆ ಎಂದು ತಮ್ಮ ಸ್ವಾರ್ಥಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಿನ್ನೆಯೆ ಅದಕ್ಕೆಲ್ಲ ತೆರೆಬಿದ್ದಿದ್ದು, ಯಾವುದೇ ಗೊಂದಲಗಳೂ ಈಗಿಲ್ಲ.ಇಬ್ಬರು ಗುರುಗಳ ನೇತೃತ್ವದಲ್ಲಿ ನಮ್ಮ ಸಮಾಜ ಮೀಸಲಾತಿ ಪಡೆಯಲಿದೆ ಎಂದರು.
ಸಮಾಜದಿಂದ ನಾವೆಲ್ಲರೂ ನಿನ್ನೆ ಹರಿಹರ ಪೀಠದ ವಚನಾನಂದ ಶ್ರೀಗಳನ್ನು ಮತ್ತು ಸಮಾಜದ ರಾಜ್ಯ ಗೌರವಾಧ್ಯಕ್ಷರಾಗಿರುವ ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ ಅವರನ್ನು ಭೇಟಿ ಮಾಡಿದೆವು ಅವರೆಲ್ಲರೂ ಪಾದಯಾತ್ರೆಗೆ ಬೆಂಬಲಿಸಿರುವುದು ಮಾತ್ರವಲ್ಲದೇ ಪಾದಯಾತ್ರೆಯಲ್ಲಿ ಸಂತೋಷದಿಂದಲೇ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಶಾಸಕ ಬಸವನಗೌಡ ಯತ್ನಾಳ್, ಸೋಮಣ್ಣ, ಮಾಜಿ ಸಚಿವ ವಿಜಯಾನಂದ ಕಾಶೆಪ್ಪನವರ್, ಗೀತಾ ಕಾಶೆಪ್ಪನವರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿ ಗೋಷ್ಠಿಯಲ್ಲಿ ವೀಣಾ ಕಾಶೆಪ್ಪನವರ್, ಪ್ರಭು ಕಲ್ಭುರ್ಗಿ, ಸಮಾಜದ ಮುಖಂಡ ಬಸಟೆಪ್ಪ, ಮಂಜುಳಾ ಮಹೇಶ್, ಬಾತಿ ನಾಗರಾಜ್, ಹದಡಿ ರವಿ, ತಣಿಗೇರಿ ಶಿವಕುಮಾರ್ ಮತ್ತಿತರರು ಇದ್ದರು.



