ದಾವಣಗೆರೆ: ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ಹರಿಹರದ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ಫೆ. 21 ರಿಂದ ಪ್ರತಿ ಸೋಮವಾರ ಮತ್ತು ಗುರುವಾರದಂದು ಮೆಕ್ಕೆಜೋಳವನು ಇ-ಟೆಂಡರ್ ಮೂಲಕ ಮಾರಾಟ ಆರಂಭವಾಗಿದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಮಕ್ಕೆಜೋಳ ಉತ್ಪನ್ನವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ಗೆ ರೂ.1870/- ಗಳಿಗಿಂತ ಕಡಿಮೆ ಧಾರಣೆ ಆಗುತ್ತಿರುವುದು ಕಂಡುಬಂದಿದೆ. ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡಲು ಕಳೆದ ತಿಂಗಳು ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದದಲ್ಲಿ ತಿಳಿಸಿದ್ದು, ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಲ್ಲಿಯ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮೆಕ್ಕೆಜೋಳ ಉತ್ಪನ್ನಕ್ಕೆ ಇ-ಟೆಂಡರ್ ಮಾರಾಟ ಪದ್ದತಿಯನ್ನು ಅಳವಡಿಸಿಕೊಂಡು ಮಾರಾಟ ಮಾಡಲು ನಿರ್ದೇಶನ ನೀಡಿರುತ್ತಾರೆ. ಸಮಿತಿಯ ವ್ಯಾಪ್ತಿಯಲ್ಲಿ ಬೆಳೆಯುವ ಕೃಷಿ ಹುಟ್ಟುವಳಿಯಾದ ಮೆಕ್ಕೆಜೋಳವನ್ನು ಫೆ.21 ರಿಂದ ಪ್ರತಿ ಸೋಮವಾರ ಹಾಗೂ ಗುರುವಾರದಂದು ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ಇ-ಟೆಂಡರ್ ಮಾರಾಟ ಪದ್ದತಿ ಮೂಲಕ ವ್ಯಾಪಾರ ವಹಿವಾಟು ಮಾಡಲು ಆರಂಭಿಸಲಾಗುವುದು.
ರೈತಬಾಂಧವರು ತಾವು ಬೆಳೆದ ಮೆಕ್ಕೆಜೋಳ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಇ-ಟೆಂಡರ್ನಲ್ಲಿ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆದುಕೊಳ್ಳಬೇಕೆಂದು ಎಪಿಎಂಸಿ ಆಡಳಿತಾಧಿಕಾರಿ ಕೆ.ಬಿ ರಾಮಚಂದ್ರಪ್ಪ ಹಾಗೂ ಕಾರ್ಯದರ್ಶಿ ವಿದ್ಯಾಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.