ದಾವಣಗೆರೆ: ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೊಂಡಿದ್ದರೂ, ಇದುವರೆಗೂ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭ ಮಾಡದೆ ಇರುವ ಫಲಾನುಭವಿಗಳನ್ನು ಗುರುತಿಸಿ ಮನೆ ಮಂಜೂರಾತಿಯನ್ನು ರದ್ದುಪಡಿಸಿ. ಆ ಮನೆಯನ್ನು ಬೇರೆ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಮಾಡಲು ಕ್ರಮ ವಹಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆವಾಸ್ (ನಗರ) ಯೋಜನೆಯಡಿ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1346 ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮನೆ ಪ್ರಾರಂಭಿಸದೇ ಇರುವುದರಿಂದ ಆನ್ಲೈನ್ ತಂತ್ರಾಂಶದಲ್ಲಿ ಬ್ಲಾಕ್ ಮಾಡಲಾಗಿರುತ್ತದೆ. ಹೀಗಾಗಿ ಕಳೆದ ಜೂನ್ 28 ರಂದು ರಾಜೀವ್ಗಾಂಧಿ ವಸತಿ ನಿಗಮದಿಂದ ಬ್ಲಾಕ್ ಮಾಡಲಾಗಿರುವ ಮನೆಗಳನ್ನು ರದ್ದುಪಡಿಸುವಂತೆ ಆದೇಶಿಸಿರುತ್ತಾರೆ. ವಾಜಪೇಯಿ ನಗರ ವಸತಿ, ಡಾ. ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು ವಸತಿ, ಪಿಎಂಎವೈ (ನಗರ) ಯೋಜನೆಗಳಡಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 5360 ಮನೆಗಳು ಮಂಜೂರಾತಿಯಾಗಿದ್ದು, ಈ ಪೈಕಿ 1492 ಮನೆಗಳು ಪೂರ್ಣಗೊಂಡಿವೆ, 2657 ಮನೆಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಆದರೆ 1211 ಮನೆಗಳ ನಿರ್ಮಾಣ ಇನ್ನೂ ಪ್ರಾರಂಭವೇ ಆಗಿಲ್ಲ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಅವರು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಆವಾಸ್ ವಸತಿ (ಗ್ರಾಮೀಣ) ಯೋಜನೆಯಡಿ 2016-17 ರಿಂದ 2019-20 ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 2614 ಮನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಿದ್ದು, ಈ ಪೈಕಿ 1261 ಮನೆಗಳು ಪೂರ್ಣಗೊಂಡಿದ್ದು, 484 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಇನ್ನೂ 253 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ, 619 ಮನೆಗಳು ತಂತ್ರಾಂಶದಲ್ಲಿ ಬ್ಲಾಕ್ ಆಗಿವೆ ಎಂದು ಜಿ.ಪಂ. ಯೋಜನಾ ನಿರ್ದೇಶಕರು ಹೇಳಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು, ಅರ್ಹರಲ್ಲದ ಹಾಗೂ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ಇಲ್ಲದಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಕ್ಕೆ ಈ ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹರಾದವರನ್ನು ಮಾತ್ರ ಆಯ್ಕೆ ಮಾಡಬೇಕು. ಕೆಲವರು ಜನಪ್ರತಿನಿಧಿಗಳಿಂದ ಹಾಗೂ ಖುದ್ದು ನಾವು ಕೂಡ ಶಿಫಾರಸು ಪತ್ರ ನೀಡುತ್ತೇವೆ, ಆದರೆ ಅವರು ಅರ್ಹರೋ ಅಲ್ಲವೋ ಎಂಬುದು ನಮಗೂ ಗೊತ್ತಿರುವುದಿಲ್ಲ. ಹೀಗಾಗಿ ಅಧಿಕಾರಿಗಳಾದವರು ಅರ್ಹತೆ ಬಗ್ಗೆ ಪರಿಶೀಲಿಸಬೇಕು, ಕಡ್ಡಾಯವಾಗಿ ಗ್ರಾಮ ಸಭೆ ನಡೆಸಿಯೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅನರ್ಹರಿಗೆ ನಾವು ಶಿಫಾರಸು ಪತ್ರ ನೀಡಿದ್ದರೂ, ಅಂತಹ ಪತ್ರಕ್ಕೆ ಅಧಿಕಾರಿಗಳು ಮನ್ನಣೆ ನೀಡಬಾರದು. ತಂತ್ರಾಂಶದಲ್ಲಿ ಬ್ಲಾಕ್ ಆಗಿರುವ ಮನೆಗಳನ್ನು ರದ್ದುಪಡಿಸಿ, ಅದನ್ನು ಹೊಸದಾಗಿ ಪಡೆದು, ಬೇರೆ ಅರ್ಹರಿಗೆ ಮನೆ ಮಂಜೂರಾತಿ ಮಾಡಬೇಕು ಎಂದರು.
ಸರ್ಕಾರದ ಯಾವುದೇ ವಸತಿ ಯೋಜನೆಗಳಡಿ ಮನೆ ಮಂಜೂರು ಮಾಡಲು ಯಾರೂ ಕೂಡ ಹಣ ನೀಡಬಾರದು. ಒಂದು ವೇಳೆ ಮನೆ ಮಂಜೂರಾತಿಗೆ ಹಣ ನೀಡುವಂತೆ ಯಾವುದೇ ಅಧಿಕಾರಿ, ಅಥವಾ ಯಾವುದೇ ವ್ಯಕ್ತಿಗಳು ಹಣ ನೀಡುವಂತೆ ಬೇಡಿಕೆ ಇಟ್ಟರೆ, ಕೂಡಲೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಥವಾ ಸಂಸದರು, ಶಾಸಕರುಗಳಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಇದುವರೆಗೂ ಮನೆಗಳನ್ನು ಪ್ರಾರಂಭಿಸದೇ ಇರುವವರಿಗೆ ಕೂಡಲೇ ಅಂತಿಮ ನೋಟಿಸ್ ನೀಡಿ, ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ ಪ್ರಾರಂಭಿಸದಿದ್ದರೆ, ಮಂಜೂರಾತಿ ರದ್ದುಪಡಿಸಿ, ಆಯಾ ಶಾಸಕರ ಗಮನಕ್ಕೆ ತಂದು, ಬೇರೆ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಮಾಡಲು ತಕ್ಷಣ ಕ್ರಮ ಜರುಗಿಸಬೇಕು. ಈ ಕುರಿತು ಅಧಿಕಾರಿಗಳು ಒಂದು ವಾರದ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸಂಸದರು.
ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ಅವರು ಮಾತನಾಡಿ, 2018 ರ ಸಮೀಕ್ಷೆಯನ್ವಯ ಈಗಾಗಲೆ ವಸತಿ ರಹಿತರ ಪಟ್ಟಿ ಇದ್ದು, ಮನೆ ಮಂಜೂರು ಮಾಡುವ ಸಂದರ್ಭದಲ್ಲಿ ಈ ಪಟ್ಟಿಯಲ್ಲಿರುವವರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಪಟ್ಟಿಯಲ್ಲಿ ಇಲ್ಲದಿರುವವರ ಹೆಸರಿಗೆ ಮನೆ ಮಂಜೂರು ಮಾಡಲು ತಂತ್ರಾಂಶದಲ್ಲಿ ಅವಕಾಶವಿಲ್ಲ ಎಂದರು.
ಹರಿಹರ ತಾಲ್ಲೂಕು ನಿಟ್ಟೂರು ಗ್ರಾಮದ ಕಾಲುವೆ ಪಕ್ಕದಲ್ಲಿ ಗುಡಿಸಲು ನಿರ್ಮಿಸಿಕೊಂಡು ಸುಮಾರು 10 ಕುಟುಂಬಗಳು ಕಳೆದ 10 ವರ್ಷಗಳಿಂದ ವಾಸವಾಗಿದ್ದಾರೆ, ಅವರಿಗೆ ಮನೆಗಾಗಿ ಸರ್ಕಾರಿ ಜಮೀನನ್ನು ಇದುವರೆಗೂ ಗುರುತಿಸದೇ ಇರುವ ಹರಿಹರ ತಾ.ಪಂ. ಕಾರ್ಯ ನಿರ್ವಾಹಕರ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು. ಬಡವರಿಗೆ ಮನೆ ಕೊಡಲು ಸಾಧ್ಯವಿಲ್ಲದಿದ್ದರೆ, ನಾವೇಕೆ ಇರಬೇಕು?, ಇಷ್ಟು ದಿನಗಳಾದರೂ, ಭೂಮಿ ಗುರುತಿಸಲು ನೀವು ಪ್ರಾಮಾಣಿಕ ಯತ್ನ ಮಾಡಿಲ್ಲ, ಒಂದು ವಾರದೊಳಗೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಇಒ ಅವರು, ಈಗಾಗಲೆ 10 ಕುಟುಂಬಗಳನ್ನು ವಸತಿ ರಹಿತರ ಪಟ್ಟಿಗೆ ಸೇರ್ಪಡೆ ಮಾಡಿಕೊಂಡಿದ್ದು, ಭೂಮಿ ಗುರುತಿಸಿದ ಬಳಿಕ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.