ಕನ್ನಡನಾಡು ಕಂಡು ಕೇಳರಿಯದ ಅಪ್ರತಿಮ ಧೀರ ಸನ್ಯಾಸಿ…. ಭಕ್ತರ ಸುಖ ದುಃಖಗಳನ್ನು ತಮ್ಮವೇ ಸುಖ ದುಃಖಗಳೆಂದು ಭಾವಿಸಿ ಸಮಾಜದ ಕಣ್ಣೀರೊರೆಸಿ ಬಿದ್ದವರ ಬಾಳಿನಲ್ಲಿ ನಗೆಯ ಬೆಳದಿಂಗಳನ್ನು ಮೂಡಿಸಲು ತಮ್ಮ ಇಡೀ ಬಾಳನ್ನೇ ಮುಡುಪಾಗಿಟ್ಟವರು…
ಹಳ್ಳಿಗಾಡುಗಳಲ್ಲಿ ನೆಲೆ ಕಳೆದುಕೊಂಡ ಬೇರುಗಳಿಗೆ ಶಿಕ್ಷಣದ ನೀರೆರೆದು ಬದುಕಿ, ಸುಡುವ ಬೆಂಗಾಡಿನಲ್ಲಿಯೂ ಏಳುಸುತ್ತಿನ ಬೆಳ್ಳನೆಯ ಮಲ್ಲಿಗೆಯನ್ನು ಅರಳಿಸಿದವರು…ಬಸವಣ್ಣನವರ ವಚನವಾರಿಧಿಗೆ ಬರೆದ ಹೊಸ ಭಾಷ್ಯದಂತಿತ್ತು ಅವರ ನಿರ್ಮಲ ಬದುಕು… ಹಾಗೆಯೇ ಕಡು ವೈರಿಯೂ ಮೆಚ್ಚಿ ತಲೆದೂಗುವಂತಿದ್ದ ಸಿರಿಗೆರೆಯ ತರಳಬಾಳು ಮಠದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಬದುಕು…..
ಉರಿ ಬರಲಿ ಸಿರಿ ಬರಲಿ…ಆಂಜದ ಅಳುಕದ ಅದರ ಧೀರ ನಡೆ-ನುಡಿಯಿಂದ ಸಾಧು ಲಿಂಗಾಯತ ಸಮಾಜವನ್ನು ಮುನ್ನಡೆಸಿದರು… ‘ಕಾಯಕವೇ ಶಿವಪೂಜೆ , ಜನತೆಯೇ ಜಂಗಮವೆಂದು’ ನುಡಿದು ಅದರಂತೆ ನಡೆದು ಈ ಭವದ ಬದುಕಿನಲ್ಲಿ ನಿರತಾವರೆಯಂತೆ ನಡೆಸಿದ ಅವರ ಬದುಕು ಅನನ್ಯ, ಅಸದೃಶ…
ಸೆ. 24 ರಂದು ಶ್ರದ್ಧಾಂಜಲಿ ಸಮಾರಂಭಸಿ
ರಿಗೆರೆ ಬೃಹನ್ಮಠದ ಸಿಂಹಾಸನವನ್ನು ತೆರವು ಮಾಡಿ ಅದನ್ನು ತಮ್ಮ ಉತ್ತರಾಧಿಕಾರಿ ಗುರುವಿಗೆ ನೀಡಿದ್ದಾರೆಂಬುದು ನಿಜ . ಆದರೆ ತಮ್ಮ ಭಕ್ತರು ಮುಹೂರ್ತ ಮಾಡಿಸಿದ ಸಿಂಹಾಸನವನ್ನು ಅವರು ಎಂದೂ ತೆರವು ಮಾಡಲಾರರು. ಏಕೆಂದರೆ ಅವರ ಭಕ್ತರ ಹೃದಯವೇ ಆಗಿದೆ. ಸದ್ಭಕ್ತರ ಹೃದಯ ಸಿಂಹಾಸನಾಧೀಶ್ವರರಾದ ಅವರನ್ನು ನೆನೆಯುವುದೇ ಪುಣ್ಯಕರ… ಇದೀಗ ಅವರ 27ನೇಯ ಶ್ರದ್ಧಾಂಜಲಿ ಸಮಾರಂಭ ಇದೇ ತಿಂಗಳು 24 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ಸಮಾಜದ ಬಂಧುಗಳು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ…
ಈ ಸಮಾರಂಭವು ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಿ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಕೇಂದ್ರ ಸರ್ಕಾರದ ಸಚಿವರುಗಳಾದ ಪ್ರಹ್ಲಾದ ಜೋಶಿರವರು, ಸುರೇಶ್ ಅಂಗಡಿಯವರು, ರಾಜ್ಯ ಸರ್ಕಾರದ ಸಚಿವರುಗಳು, ಶಾಸಕರುಗಳು ಭಾಗವಹಿಸುವರು…
ಅಮರಾವತಿಯಲ್ಲಿ ಅಕ್ಕಿ ಸಮರ್ಪಣೆ
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತರ ದಾಸೋಹ ಕೈಂಕರ್ಯಕ್ಕೆ ಹಲವಾರು ತಾಲ್ಲೂಕಿನ ಭಕ್ತರು ಅಕ್ಕಿ ಸಮರ್ಪಣೆಗೈಯುವ ಪ್ರತೀತಿ ಕಳೆದ 27 ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಂತೆಯೇ ಈ ವರ್ಷದ ಅಕ್ಕಿ ಸಮರ್ಪಣೆ ಕಾರ್ಯಕ್ರಮ ಹೊನ್ನಾಳಿ, ಭದ್ರಾವತಿ, ಶಿವಮೊಗ್ಗ, ದೇವಕಾತಿ ಕೊಪ್ಪ ದಲ್ಲಿ ಜರುಗಿದ್ದು.ಇಂದು ಹರಿಹರ ತಾಲ್ಲೂಕಿನ ಅಮರಾವತಿಯಲ್ಲಿ ನಡೆಯಿತು…..
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಶ್ರೀ ಮಠವು ರೈತಪರವಾಗಿ, ಹತ್ತಾರು ನೀರಾವರಿ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದು, ಸರ್ಕಾರಗಳ ಉತ್ತಮ ಸ್ಪಂದನೆಯಿಂದ ಸಾವಿರಾರು ಕೋಟಿ ರೂಪಾಯಿಗಳು ಬಿಡುಗಡೆಯಾಗಿದ್ದು, ಇನ್ನೊಂದು ವರ್ಷದಲ್ಲಿ ಯೋಜನೆಗಳು ಯಶಸ್ವಿಯಾಗಿ ಕಾರ್ಯಗತವಾಗುವ ಭರವಸೆ ಇದೆ ಎಂದರು.
ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ದೊರೆತ ಸ್ಪಂದನೆ ಎಲ್ಲರೂ ಮೆಚ್ಚುವಂತಹ ದಾಗಿದ್ದು, ಧರ್ಮ ಜೀವಂತಿಕೆ ಎಂಬುದು ಇದರಿಂದ ಮನವರಿಕೆಯಾಗುತ್ತದೆ. ಈಗಾಗಲೇ ಶ್ರೀ ಮಠದಿಂದ ಉತ್ತರ ಕರ್ನಾಟಕದ ಬೆಳಗಾವಿ, ಗದಗ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ.
ಮೂರನೇ ಹಂತವಾಗಿ ಹಾವೇರಿ ಜಿಲ್ಲೆಯ ಹಳ್ಳಿಗಳಿಗೆ ನೆರವು ನೀಡುವುದಾಗಿ ಘೋಷಿಸಿದರು. ಪೂಜ್ಯ ಶ್ರೀಗಳವರನ್ನು ಸಾವಿರಾರು ಗ್ರಾಮಸ್ಥರು, ಯುವಕರು, ಮಹಿಳೆಯರು ಭಕ್ತಿ ಪೂರ್ವಕವಾಗಿ, ಉತ್ಸಾಹದಿಂದ ಸ್ವಾಗತಿಸಿದರು.