Connect with us

Dvgsuddi Kannada | online news portal | Kannada news online

ಕವನ: ನಿತ್ಯ ನಿರಂತರ

ಅಂಕಣ

ಕವನ: ನಿತ್ಯ ನಿರಂತರ

ನಿತ್ಯ ನಿರಂತರ ಸಂಚಲನ ಸಂಚಾರಿ

ನಿರ್ಮಲ ಚಲನಶೀಲ ನಿರ್ಮಾಣ ಸ್ವರೂಪಿ

ನಲ್ನುಡಿ ಗಳಿಂದ ನಾಡ ಕಟ್ಟುವುದ ಕಲಿಸಿದವ

ಸಾಮಾನ್ಯರ ಅಸಾಮಾನ್ಯರ ನಾಡಿಮಿಡಿತವಾದವ

ದೇಶ-ಭಾಷೆ ಸೀಮೆಗಳಾಚೆ ನುಡಿವ ಭಾಷೆ ಗಾಂಧಿ

 

ಜಾತಿ- ಮತ,ಅಂತಸ್ತು-ಅಧಿಕಾರಗಳ ಮೇರೆ ಮೀರಿದಾತ

ವ್ಯಕ್ತಿ- ವ್ಯಕ್ತಿತ್ವ, ಮನುಷ್ಯ- ಮನುಷ್ಯತ್ವಗಳ ರೂಪಕವಾದವ

ಅವರ ಹೆಸರಿಗಿಲ್ಲ ಆಸ್ತಿ,ಗಾಂಧಿಯೇ ನಮಗೆ ಸ್ಥಿರಾಸ್ತಿ- ಚರಾಸ್ತಿ

ಶಾಂತಿ-ಸಹನೆಗಳೆಂಬ ಸಮ್ಮೋಹನಾಸ್ತ್ರ ಸಂಶೋಧಕ 

ಗಾಂಧಿವಾದವೆಂಬುದಿಲ್ಲ ,ನಿತ್ಯ ನಿರ್ವಿವಾದ ಗಾಂಧಿ

 

ಸಾತ್ವಿಕ ಸಿಟ್ಟಿನಿಂದ ಸತ್ಪುರುಷನಾದವ 

ಸನ್ನಡತೆ ಸದ್ಭಾವಗಳ ಸಾಕಾರ ಪ್ರತಿಮೆ 

ಸಹನೆ ತಾಳ್ಮೆ ಸಜ್ಜನಿಕೆಗಳ ಸನ್ಯಾಸಿ 

ಜಗದ ಬಂದು ಬಳಗವಾದವ 

ಗಾಂಧಿ ಬರಿಯ ತತ್ವವಲ್ಲ, ಆಚರಣೆಯೇ ಎಲ್ಲಾ

 

ಅಹಂಕಾರಿಯಲ್ಲ ಹಠವಾದಿ

ಪಂಚೇಂದ್ರಿಯ ನಿಯಂತ್ರಣವಾದಿ

ಕತ್ತಲೆ- ಬೆತ್ತಲೆಗಳ ಒತ್ತಡಕ್ಕೆ ಬೆಳಕಾದವ

ಕಾಮ-ಕ್ರೋಧ ಮದ-ಮತ್ಸರ ಮೀರಿದಾತ

ತಾನೆ ಉರಿದು ಪರರಿಗೆ ದೀಪವಾದ ಗಾಂಧಿ

 

ಬಹುರ್ಮುಖಿ ಬಹುರ್ಭಾವ ಭಾವುಕ ಗಾಂಧಿ 

ಬಡ-ಬಗ್ಗರ ವಿನೀತ ಭಾವ

ಆಂದೋಲನದ ಜೀವಾಳ, ಆಳುವವರ ಬಂಡವಾಳ 

ಆಳುವವರ ಅಂತರಾಳ ಕಲಕುವ ಚಿತ್ರಪಟವು

ಪ್ರಬುದ್ಧರಿಗೆ ಅಪ್ರಬುದ್ಧರಿಗೆ ಬುದ್ಧನಾದ ಗಾಂಧಿ

 

ಕಟ್ಟಿದೆ ಕಟ್ಟುವೆ ಎನ್ನದೆ ಬದುಕ ಕಟ್ಟಿದವ          

ರಾಜ್ಯ ಅವಶ್ಯಕ ಪೀಡೆಯೆಂದರೂ

ರಾಮ ರಾಜ್ಯ,ಗ್ರಾಮ ರಾಜ್ಯ,ಆದರ್ಶ ರಾಜ್ಯ ಪೋಷಕ 

ಮನ ಮನೆಗಳ ಮಾತಾದ ಮಾನವತೆ 

ಸ್ವಾವಲಂಬಿ ಸ್ವಾಭಿಮಾನಿ ಸ್ವರಾಜ್ಯ ಮಂತ್ರವಾದಿ ಗಾಂಧಿ

 

ಕಥೆ ಕಾವ್ಯ ಕಾದಂಬರಿ ಕವನ ರೂಪಕವಂತೆ 

ಗಾಂಧಿಗೆ ಗಾಂಧಿಯೇ ಪರ್ಯಾಯವಂತೆ 

ನಡೆ-ನುಡಿ ನಡತೆಗಳ ಸತ್ಯಸ್ಯ ಸತ್ವವಂತೆ

ಮತ್ತೆ ಮತ್ತೆ ಕಾಡುವ ಮಿಣುಕು ಬಿಂಬವಂತೆ 

ನಿತ್ಯ ನಿರಂತರ ಸಂಚಲನ ಸಂಚಾರಿ ಗಾಂಧಿ

 

ಅಶೋಕ್ ಕುಮಾರ್

ಸಹ ಪ್ರಾಧ್ಯಾಪಕ

ರಾಜ್ಯ ಶಾಸ್ತ್ರ ವಿಭಾಗ

ಸರ್ಕಾರಿ   ಕಲಾ  ಕಾಲೇಜು

ಬೆಂಗಳೂರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

To Top