ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ನರ್ಸ್ ವೃತ್ತಿಯ ಜೊತೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಇತಿಹಾಸ ಕರಿತು ಪುಸ್ತಕ ರಚಿಸಿದ ಟಿ.ಗಿರಿಜಾ ಅವರ ಸಾಧನೆ ಬಹಳ ಅಪರೂಪವಾದದ್ದು ಎಂದು ಬಾಪುಜಿ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸಾಹಿತಿ ಟಿ. ಗಿರಿಜಾ ಅವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಮಹಿಳೆಯರು ಕಥೆ, ಕಾದಂಬರಿ ಓದುವ ಮತ್ತು ಬರೆಯುವ ಕಾಲದಲ್ಲಿ, ಗಿರಿಜಾ ಅವರು ಇತಿಹಾಸ ಸಂಗ್ರಹಿಸಿ ಪುಸ್ತಕ ಬರೆದು, ಪ್ರಮುಖ ಇತಿಹಾಸಕಾರಲ್ಲಿ ಅವರು ಕೂಡ ಒಬ್ಬರಾಗಿ ನಿಲ್ಲುತ್ತಾರೆ ಎಂದರು.
ದಾವಣಗೆರೆಯಲ್ಲಿ ದಾನಿಗಳ ಹೆಸರಲ್ಲಿ ಸರಕಾರಿ ಆಸ್ಪತ್ರೆ, ಕಾಲೇಜು, ವಿದ್ಯಾಸಂಸ್ಥೆಗಳು ನಡೆಯುತ್ತಿದ್ದು ದೇಶದಾದ್ಯಂತ ಖ್ಯಾತಿ ಪಡೆದಿವೆ. ಅವುಗಳ ಸಾಲಿನಲ್ಲಿ ನಿಲ್ಲುವಂತಹ ಸಾಹಿತಿ ಟಿ. ಗಿರಿಜಾ ಹೆಸರಿನಲ್ಲಿ ಅವರ ಸಹೋದರಿ ಶೈಲಜಾ ಅವರು ದತ್ತಿನಿ ಕಾರ್ಯಕ್ರಮ ನಡೆಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದರು.
ದತ್ತಿ, ದಾನಗಳು ನಮ್ಮ ದೇಶದ ಪರಂಪರೆಗಳು. ಉಳ್ಳವರು ಹಾಗೂ ಉಳ್ಳದವರ ನಡುವೆ ನಡೆದಿದ್ದು ಇತಿಹಾಸವಾದರೆ, ಉಳ್ಳವರು ಇಲ್ಲದವರಿಗೆ ನೀಡುವುದು ದಾನವಾಯಿತು. ಇತಿಹಾಸವನ್ನು ಯಾರು ಬೇಕಾದರು ಸೃಷ್ಟಿಸಬಹುದು. ಆದರೆ ಅದೆಲ್ಲವನ್ನು ಒಟ್ಟುಗೂಡಿಸಿ ಬರೆಯುವುದು ದೊಡ್ಡ ಸಾಧನೆ. ಆ ಕೆಲಸವನ್ನು ಸಾಹಿತಿ ಟಿ. ಗಿರಿಜಾ ಅವರು ಮಾಡಿದ್ದಾರೆ ಎಂದರು.
ದತ್ತಿನಿ ನೀಡುವವರಿಗೆ ತೆರಿಗೆ ವಿನಾಯಿತಿ
ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ತಾವು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಎಲ್ಲ ಕಾಲೇಜುಗಳಲ್ಲಿಯೂ ದತ್ತಿನಿ ಆರಂಭಿಸಿದ್ದು, ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ. ದತ್ತಿನಿ ನೀಡುವವರಿಗೆ ತೆರಿಗೆ ವಿನಾಯಿತು ಇದ್ದು, ಶಾಲಾ-ಕಾಲೇಜುಗಳಲ್ಲಿ, ವಿವಿಗಗಳಲ್ಲಿ ಸಾರ್ವಜನಿಕರ ದತ್ತಿನಿ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳ ಪ್ರಾಚಾರ್ಯರು ದಾನಿಗಳು ಕಾರ್ಯಾನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ಗಿರಿಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಐಕ್ಯೂಎಸಿ ಸಂಚಾಲಕ ಡಾ.ಆರ್.ಸಿ.ನಾಗರಾಜ್, ಅರುಂಧತ್ತಿ ರಮೇಶ್, ದಾದಾಪೀರ್, ಜಯಮ್ಮ ಇತರರು ಉಪಸ್ಥಿತರಿದ್ದರು.



