ಡಿವಿಜಿ ಸುದ್ದಿ, ಹಿರೇಕೆರೂರ: ತಾಲ್ಲೂಕಿನ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಿಸಲು ಪ್ರಯತ್ನ ಮಾಡಿದ ಆರೋಪದ ಮೇಲೆ ನಾಲ್ವರು ಶಿಕ್ಷಕರು ಸೇರಿದಂತೆ ಐವರ ವಿರುದ್ಧ ಎಫ್ ಐಆರ್ ಪ್ರಕರಣ ದಾಖಲಾಗಿದೆ.
ಶಿಕ್ಷಕರಾದ ಜಗದೀಶ ಶಿವಪ್ಪ, ಮನೋಹರ ಬಿ.ಆರ್, ಗುತ್ತೆಪ್ಪ ಬಾಳಂಬೀಡ, ಶಿವಯೋಗಿ ರಾಗಿ ಅವರನ್ನು ಬಂಧಿಸಲಾಗಿದೆ. ಈ ನಾಲ್ವರು ಶಿಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ.
ಈ ಬಗ್ಗೆ ತಹಶೀಲ್ದಾರ್ ಆರ್.ಎಚ್. ಭಾಗವಾನ್ ಮಾಹಿತಿ ನೀಡಿದ್ದು, ನಾನು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಓಡಿ ಹೋಗಲು ಯತ್ನಿಸಿದರು. ತಡೆದು ವಿಚಾರಣೆ ನಡೆಸಿದಾಗ, ಅವರ ಬಳಿ ನಕಲು ಚೀಟಿಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದೇನೆ. ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನಾಗರಾಜ ಸುಂಕಾಪುರ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.



