ಡಿವಿಜಿಸುದ್ದಿ.ಕಾಂ, ದಾವಣಗೆರೆ: ಅಧಿಕಾರಿಗಳ ತಂಡ ರಚಿಸಿಕೊಂಡು ಸೆ.30 ರೊಳಗೆ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಮರು ಸಮೀಕ್ಷೆಗೆ ವರದಿ ನೀಡುವಂತೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ ಸಹಯೋಗದೊಂದಿಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ವಿಶೇಷ ಮರುಸಮೀಕ್ಷೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವಾರ್ಡ್ಗಳಲ್ಲಿ ಸಮೀಕ್ಷೆ ಕುರಿತು ಘೋಷಣೆ ಕೂಗಿಸುವ ಮೂಲಕ ಮ್ಯಾನುವೆಲ್ ಸ್ಕ್ಯಾವೆಂಜರ್ ಗಳನ್ನು ಗುರುತಿಸಬೇಕು. ಇದಕ್ಕೆ ಅಗತ್ಯ ತಂಡ ರಚಿಸಿಕೊಂಡು ಸಮೀಕ್ಷೆ ನಡೆಸಿ ಈ ತಿಂಗಳ ಅಂತ್ಯದೊಳಗೆ ಸಲ್ಲಿಸಬೇಕೆಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಹಿಂದೆ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 156 ಮತ್ತು ಹರಿಹರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 48 ಮ್ಯಾನುವೆಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸಿ ಕೇಂದ್ರಕ್ಕೆ ಪಟ್ಟಿ ಕಳುಹಿಸಲಾಗಿತ್ತು ಆದರೆ ಆಗ ನಿಗದಿತ ನಮೂನೆಯಲ್ಲಿ ಪಟ್ಟಿ ಕಳುಹಿಸಲಾಗಿಲ್ಲ ಎಂದು ಮಾನ್ಯತೆ ದೊರೆತಿಲ್ಲ. ಅ. 19 ರೊಳಗೆ ಇನ್ನೊಮ್ಮೆ ವರದಿಸಲ್ಲಿಸಲ್ಲಿಸಲುಅವಕಾಶವಿದೆ ಎಂದರು.
ಪೌರ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ಪೌರ ಕಾರ್ಮಿಕರಿಗೂ ಮ್ಯಾನುವೆಲ್ ಸ್ಕ್ಯಾವೆಂಜರ್ಗಳಿಗೆ ನೀಡಲಾಗುವ ಸೌಲಭ್ಯಗಳನ್ನು ವಿಸ್ತರಿಸಬೇಕು. ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗುತ್ತಿಲ್ಲ. ಕೇಳಿದರೆ ಕಾರ್ಡ್ ಇಲ್ಲ ಎನ್ನುತ್ತಾರೆ. ಕೆಲವರು ಮಾತ್ರ ಹಣ ನೀಡಿ ಗುರುತಿನ ಚೀಟಿ ಪಡೆಯುತ್ತಿದ್ದಾರೆಂದು ದೂರಿದ ಅವರು ಪೌರಕಾರ್ಮಿಕರಿಗೆ ಕಾಲ ಕಾಲಕ್ಕೆ ಮಾಸ್ಟರ್ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ಹಾಗೂ ಪೌರಕಾರ್ಮಿಕರ ಕುಂದು ಕೊರತೆ ಆಲಿಸಬೇಕು ಎಂದು ಮನವಿ ಮಾಡಿದರು.
ಪಾಲಿಕೆಯಲ್ಲಿ ಒಟ್ಟು 633 ಪೌರಕಾರ್ಮಿಕರ ಮಂಜೂರಾದ ಹುದ್ದೆಗಳಿದ್ದು ಈ ಪೈಕಿ 290 ಖಾಯಂ ಮತ್ತು ೨೪೫ ನೇರ ಪಾವತಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಪೌರಕಾರ್ಮಿಕರೇ. ಮ್ಯಾನುವೆಲ್ ಸ್ಕ್ಯಾವೆಂಜರ್ ಗಳು ಸಫಾಯಿ ಕರ್ಮಚಾರಿಗಳಿಗಿಂತ ಬೇರೆಯಾಗಿದ್ದು ಅವರ ಸೌಲಭ್ಯ ಇವರಿಗೆ ಸಿಗುವುದಿಲ್ಲ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಪೌರಕಾರ್ಮಿಕರಿಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ಕಾರ್ಡ್ ಲಭ್ಯವಿಲ್ಲದಿದ್ದರೆ ಬಿಳಿ ಹಾಳೆಯ ಮೇಲೂ ದೃಢೀಕರಿಸಿ ನೀಡಲಾಗುವುದು. ಆದರೆ ಪಾಲಿಕೆಯಲ್ಲಿ ಕೆಲಸ ಮಾಡದೇ ಇರುವ ಪೌರ ಕಾರ್ಮಿಕರು ಅವರು ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥರಿಂದಲೇ ಗುರುತಿನ ಚೀಟಿ ಪಡೆಯಬೇಕೆಂದು ಹೇಳುತ್ತಿದ್ದೇವೆ ಅಷ್ಟೆ. ಆರೋಗ್ಯ ತಪಾಸಣೆ ಬಗ್ಗೆ ಕೈಗೊಳ್ಳಲು ಜಿಲ್ಲಾಸ್ಪತ್ರೆಯ ಅಧೀಕ್ಷಕರಿಗೆ ಪತ್ರ ಬರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಹೇಳಿದರು.



