ಹೊಸದಿಲ್ಲಿ: ಕೊರೊನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು, ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ನೆರವಿಗೆ ಕೇಂದ್ರ ಸರಕಾರ ಧಾವಿಸಿದ್ದು, ಜನರಿಗೆ ಉಚಿತವಾಗಿ ಪಡಿತರ ವಿತರಿಸುವುದಾಗಿ ಘೋಷಿಸಿದೆ.
ಗುರುವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ,ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಕುಟುಂಬದ ಪ್ರತಿ ಸದಸ್ಯನಿಗೆ ನೀಡಲಾಗುತ್ತಿರುವ 5 ಕೆಜಿ ಅಕ್ಕಿ ಅಥವಾ ಗೋಧಿ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಇದರ ಜೊತೆಗೆ ಕುಟುಂಬವೊಂದಕ್ಕೆ ಆಯಾ ಪ್ರದೇಶಕ್ಕೆ ಅನುಗುಣವಾಗಿ 1 ಕೆಜಿ ಬೇಳೆಯನ್ನು ವಿತರಿಸಲಿದೆ.
ಈ ಯೋಜನೆ ಮುಂದಿನ ಮೂರು ತಿಂಗಳ ಕಾಲ ಜಾರಿ ಇರಲಿದೆ. ಇದರಿಂದ ದಿನಗೂಲಿ ನೌಕರರು, ಪಟ್ಟಣ ಮತ್ತು ಹಳ್ಳಿಯಲ್ಲಿರುವ 80 ಕೋಟಿ ಬಡವರಿಗೆ ಅನುಕೂಲವಾಗಲಿದೆ.
ಉಚಿತ ಗ್ಯಾಸ್ : ಉಜ್ವಲ ಯೋಜನೆಯಡಿಯಲ್ಲಿ 8.3 ಕೋಟಿ ಬಡ ಕುಟುಂಬಗಳಿದ್ದು, ಇವರಿಗೆ ಮುಂದಿನ ಮೂರು ತಿಂಗಳು ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವುದಾಗಿಯೂ ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.
20 ಕೋಟಿ ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ ತಲಾ 500 ರೂಪಾಯಿಯಂತೆ ಮುಂದಿನ ಮೂರು ತಿಂಗಳು ನೀಡಲಾಗುತ್ತದೆ. ವೃದ್ಧಾಪ್ಯ, ವಿಧವಾ ಮತ್ತು ದಿವ್ಯಾಂಗ ಪಿಂಚಣಿ ಪಡೆಯುತ್ತಿರುವವರಿಗೆ ಮುಂದಿನ ಮೂರು ತಿಂಗಳು ಎರಡು ಕಂತುಗಳಲ್ಲಿ ಹೆಚ್ಚುವರಿಯಾಗಿ 1,000 ರೂಪಾಯಿಗಳನ್ನು ನೀಡಲಾಗುವುದು. ನರೇಗಾ ಯೋಜನೆಯಡಿಯಲ್ಲಿ ದಿನಗೂಲಿ ಹೆಚ್ಚಳ ಮಾಡಲಾಗಿದ್ದು, ಇದರಿಂದ ಪ್ರತಿಯೊಬ್ಬರಿಗೆ ಸರಾಸರಿ 2,000 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ. ಕೃಷಿ ಸಮ್ಮಾನ್ ಯೋಜನೆಯಡಿ 8.69 ಕೋಟಿ ರೈತರಿಗೆ ಏಪ್ರಿಲ್ ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು.ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ 1.70 ಲಕ್ಷ ಕೋಟಿ ರೂ. ಪರಿಹಾರ ನಿಧಿಯನ್ನು ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.



