ಡಿವಿಜಿ ಸುದ್ದಿ, ದಾವಣಗೆರೆ: ಇಡೀ ದೇಶದಾದ್ಯಂತ ಕೊರೊನಾ ಭೀತಿ ಉಂಟಾಗಿದ್ದು, ಮಾ. 31 ವರೆಗೆ ರಾಜ್ಯದಲ್ಲಿ ಬಂದ್ ಘೋಷಣೆ ಮಾಡಲಾಗಿದೆ. ಇಡೀ ರಾಜ್ಯ ಬಂದ್ ಗೆ ಜಿಲ್ಲೆಯ ಜನರು ಸ್ಪಂದಿಸಿದ್ದು, ಎಲ್ಲಾ ಅಂಗಡಿ ಮುಂಗಟ್ಟು ಕ್ಲೋಸ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನು ನಗರದ ಮಂಡಿಪೇಟೆ, ಚಾಮರಾಜಪೇಟೆಯಲ್ಲಿ ಕದ್ದುಮುಚ್ಚಿ ವ್ಯಾಪಾರ ನಡೆಸುತ್ತಿದ್ದವರನ್ನು ಕಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಂಗಡಿ ಒಳಗೆ ನುಗ್ಗಿ ಲಾಠಿ ಏಟಿನ ರುಚಿ ತೋರಿಸಿ, ಅಂಗಡಿ ಲಾಕ್ ಮಾಡಿಸಿದ್ರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ಸಿಟಿ ರೌಂಡ್ಸ್ ಕೈಗೊಳ್ಳಲಾಗಿತ್ತು. ಈ ವೇಳೆ ಕೆಲವರು ಬಾಗಿಲು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆಗ ಅಂಗಡಿ ಒಳಗೆ ನುಗ್ಗಿದ ಎಸ್ ಪಿ ಹನಮಂತರಾಯ, ಗೌಡರ ಜಯದೇವಪ್ಪ ಬಟ್ಟೆ ಅಂಗಡಿ ಸೇರಿದಂತೆ ಕೆಲವು ವ್ಯಾಪಾರಿಗಳಿಗೆ ಲಾಠಿಯಲ್ಲಿ ಥಳಿಸಿದರು. ಕೊರೊನಾ ಜಾಗೃತಿ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಲ್ವಾ ನೀವು..? ಎಂದು ಹೊರೆಗೆ ಎಳೆತಂದು ಅಂಗಡಿ ಮುಚ್ಚಿಸಿದರು.

ಇನ್ನು ನಗರದಲ್ಲಿ ಅನವಶ್ಯಕವಾಗಿ ಓಡಾಟ ನಡೆಸುತ್ತಿದ್ದವರಿಗೆ ತಿಳಿ ಹೇಳಿ ಮನೆಗೆ ಕಳುಹಿಸಲಾಯಿತು. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿಗಳನ್ನು ಲಾಕ್ ಮಾಡಲಾಗಿತ್ತು.




