ದಾವಣಗೆರೆ: ಜಿಲ್ಲೆಯಲ್ಲಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ದಿಗೆ ಸಿಎಸ್ಆರ್ ನಿಧಿಯನ್ನು ಬಳಕೆ ಮಾಡಿಕೊಂಡು ಶೈಕ್ಷಣಿಕೆ ಅಭಿವೃದ್ದಿಗೆ ಜಿಲ್ಲಾಡಳಿತದೊಂದಿಗೆ ಕಂಪನಿಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ವಿವಿಧ ಕಂಪನಿಗಳ ಮಾಲೀಕರು ಮತ್ತು ಕೈಗಾರಿಕೋದ್ಯಮಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಪದಾಧಿಕಾರಿಗಳೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ದಿಗೆ ಶಾಲಾ ಶಿಕ್ಷಣದಲ್ಲಿ ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತ್ತು ಅಕ್ಕಪಕ್ಕದ ಜಿಲ್ಲೆಯಲ್ಲಿ ವಿವಿಧ ಕಂಪನಿಗಳು ನಡೆಯುತ್ತಿವೆ ಮತ್ತು ದಾವಣಗೆರೆ ಸ್ಥಳೀಯರು ಬೇರೆ ಸ್ಥಳದಲ್ಲಿ ಕಂಪನಿಗಳನ್ನು ನಡೆಸುತ್ತಿದ್ದು ಅಂತಹವರು ಹಾಗೂ ವೈಯಕ್ತಿಕವಾಗಿ ಕೊಡುಗೆ ನೀಡುವವರು ಸಹ ದಾವಣಗೆರೆ ಜಿಲ್ಲೆಯಲ್ಲಿನ ಶಾಲೆಗಳ ಅಭಿವೃದ್ದಿಗಾಗಿ ಸಾಮಾಜಿಕ ಒಣೆಗಾರಿಕೆಯಡಿ ಅನುದಾನವನ್ನು ಒದಗಿಸಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳ ಕುರಿತು ಮನವಿ ಮಾಡಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಷನ್ ರಡಿ ಎಲ್ಕೆಜಿಯಿಂದ ಪಿಯುಸಿ ವರೆಗೆ ಒಂದೇ ಸೂರಿನಡಿ ನಿರಂತರ ಗುಣಮಟ್ಟದ ಶಿಕ್ಷಣ ನೀಡುವುದು ಈ ಶಾಲೆಯ ಉದ್ದೇಶವಾಗಿದೆ. ಈ ಶಾಲೆಗಳಲ್ಲಿ ಹೆಚ್ಚಾಗಿ ಬಡತನದಲ್ಲಿನ ಮತ್ತು ಆರ್ಥಿಕವಾಗಿ ಹಿಂದುಳಿದವರು, ರೈತರ ಮಕ್ಕಳು ಮತ್ತು ಗ್ರಾಮೀಣ ಭಾಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸಹ ಇತರೆ ವಿದ್ಯಾರ್ಥಿಗಳಂತೆ ಸ್ಪರ್ಧಾತ್ಮಕವಾಗಿ ವಿದ್ಯಾಭ್ಯಾಸ ಮುಂದುವರೆಸಲು ಬೇಕಾದ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯವನ್ನು ಸಿಎಸ್ಆರ್ ರಡಿ ಕಲ್ಪಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಅಂದರೆ ಸರ್ಕಾರದ ಬಳಿ ಹಣವಿಲ್ಲವಂತಲ್ಲ, ಆದರೆ ಸಿಎಸ್ಆರ್ ರಡಿ ಸ್ಥಳೀಯವಾಗಿ ಅನುದಾನ ಉಪಯೋಗವಾಗಲಿ ಎಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಪೋರೇಟ್ ಸಹಭಾಗಿತ್ವವನ್ನು ಪ್ರೋತ್ಸಾಯಿಸಲು ಮತ್ತು ಸಮನ್ವಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಸಿಎಸ್ಆರ್ ಕೋಶವನ್ನು ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಕೆಪಿಎಸ್ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಕ್ಕಾಗಿ ಎಲ್ಲಾ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿನ 30 ಶಾಲೆಗಳನ್ನು ಗುರುತಿಸಲಾಗಿದೆ. ಇಲ್ಲಿ ಸುಮಾರು 7696 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳು, ಡಿಜಿಟಲ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ, ಕ್ರೀಡಾಸಾಮಗ್ರಿಗಳು, ಶಾಲಾ ಬಸ್ಸುಗಳು, ಸೌರಶಕ್ತಿ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಇದೆ ಎಂದರು.
ಕಂಪನಿಗಳು ಮತ್ತು ಸಂಘ, ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ವೈಯಕ್ತಿಕವಾಗಿ ಕೊಡುಗೆ ನೀಡುವವರು ಸಹ ತಮ್ಮ ಆರ್ಥಿಕತೆಯ ಮಿತಿಯಲ್ಲಿ ಲಭ್ಯವಾಗುವ ಸೌಕರ್ಯವನ್ನು ಕಲ್ಪಿಸಬಹುದಾಗಿದೆ. ತಾವುಗಳು ಒದಗಿಸುವ ಸೌಕರ್ಯಕ್ಕೆ ಜಿಲ್ಲಾಡಳಿತ ಇದಕ್ಕೆ ಪ್ರಮಾಣೀಕರಿಸಲಿದೆ. ಯಾವುದೇ ಅನುದಾನವನ್ನು ನೀಡದೇ ನೇರವಾಗಿ ಕಂಪನಿ, ಸಂಘ, ಸಂಸ್ಥೆಗಳ ಉಸ್ತುವಾರಿಯಲ್ಲಿಯೇ ಕಾಮಗಾರಿ ಅನುಷ್ಟಾನ ಮಾಡಬಹುದಾಗಿದೆ ಎಂದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 25 ಕೋಟಿಯಷ್ಟು ಸಿಎಸ್ಆರ್ ನಿಧಿಯಡಿ ಆಸ್ಪತ್ರೆಗಳ ಸಲಕರಣೆ, ಯಂತ್ರಗಳ ಖರೀದಿ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಸೌಕರ್ಯಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ಮಾತನಾಡಿ ಬೆಂಗಳೂರಿನಲ್ಲಿ ಹಿಂದೆ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡುವಾಗ ಮತಗಟ್ಟೆ ಇದ್ದ ಶಾಲೆಗೆ ಭೇಟಿ ನೀಡಿದಾಗ ಅದು ಕಾರ್ಪೋರೇಟ್ ಕಚೇರಿಯ ಮಾದರಿಯಲ್ಲಿತ್ತು, ಅದರ ಬಗ್ಗೆ ಮಾಹಿತಿ ಪಡೆದಾಗ ಅದು ಸರ್ಕಾರಿ ಶಾಲೆಯಾಗಿತ್ತು, ಅದನ್ನು ಸಿಎಸ್ಆರ್ ರಡಿ ನಿರ್ಮಿಸಲಾಗಿತ್ತು. ಇದೇ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯ ಕೆಪಿಎಸ್ ಶಾಲೆಗಳನ್ನು ಅಭಿವೃದ್ದಿಗೆ ಸಹಕರಿಸಬೇಕೆಂದು ಸಿಎಸ್ಆರ್ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣ ಪ್ರಸಾದ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಡೆದಯ್ಯ ಸಿ.ಹಿರೇಮಠ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಡಿಡಿಪಿಯು ಪಳನಿಸ್ವಾಮಿ ಹಾಗೂ ವಿವಿಧ ಕಂಪನಿ, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು ಉಪಸ್ಥಿತರಿದ್ದರು.


