ದಾವಣಗೆರೆ: ಮಳೆಯ ಕೊರತೆಯಿಂದ ಅಡಿಕೆ ತೋಟಗಳಲ್ಲಿ ಕೆಂಪು ನುಸಿ ಮತ್ತು ಹರಳು ಉದುರುವ ಸಮಸ್ಯೆ ಹೆಚ್ಚಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜೂನ್ ತಿಂಗಳಲ್ಲಿ ಅತಿಯಾದ ತೇವಾಂಶದ ಕೊರತೆಯಿಂದ ಆಂತರಿಕ ಉಷ್ಣಾಂಶ ತೋಟಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದ ರಸ
ಹೀರುವ ಕೆಂಪುನುಸಿ ಮತ್ತು ಬೆಳವಣಿಗೆಯ ಹಂತದಲ್ಲಿರುವ ಕಾಯಿಗಳು ಉದುರುತ್ತಿರುವ ಸಮಸ್ಯೆ ಕಳೆದೊಂದು ವಾರದಿಂದ
ಹೆಚ್ಚಾಗಿದೆ. ಆದುದರಿಂದ ರೈತರು ನುಸಿ ಪೀಡೆಯ ನಿವಾರಣೆಗೆ ಹೆಕ್ಸಿತೈಯೋಜಾಕ್ಸ್ 1.5 ಮಿಲಿ ಅಥವಾ ಪ್ರೋಪಾರ್ಗೈಟ್ 1.5
ಮೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಎಲೆಯ ಕೆಳಭಾಗದಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ತೋಟಗಳಿಗೆ ಪೋಷಕಾಂಶಗಳನ್ನು ನೀಡಲು ಸೂಕ್ತ ಸಮಯ. ಈ ವರ್ಷ ಬರಗಾಲದ ಛಾಯೆಯಿರುವುದರಿಂದ ಆದಷ್ಟು ಸಾವಯವ ಗೊಬ್ಬರಗಳನ್ನು ಮುಂಗಾರಿನಲ್ಲೇ ಕೊಡುವುದು ಉತ್ತಮ, ಹಾಗೆಯೇ ಸಂಯುಕ್ತ
ರಾಸಾಯನಿಕಗಳಾದ 10:26:26 ಅಥವಾ 15:15;15 ಗೊಬ್ಬರವನ್ನು ಹತ್ತು ವರ್ಷ ಮೇಲ್ಪಟ್ಟ ಗಿಡಗಳಿಗೆ 200 ಗ್ರಾಂ, ಪೊಟ್ಯಾಷ್
ಗೊಬ್ಬರವನ್ನು 50 ಗ್ರಾಂ. ಮತ್ತು ಲಘು ಪೋಷಕಾಂಶಗಳ ಮಿಶ್ರಣವನ್ನು 70-100 ಗ್ರಾಂ. ಪ್ರತೀ ಗಿಡಕ್ಕೆ ನೀಡಬೇಕು.
ಮಳೆ ಬರದಿದ್ದರೆ ಗಿಡಗಳಿಗೆ ನೀರನ್ನು ಶೀಘ್ರದಲ್ಲಿ ಕೊಡುವುದು ಉತ್ತಮ ಎಂದು ತಿಳಿಸಿದ್ದಾರೆ. ಭೂಮಿಯಲ್ಲಿ ತೇವಾಂಶದ ನಿರ್ವಹಣೆಗೆ ಹಸಿರೆಲೆ ಗೊಬ್ಬರದ ಗಿಡಗಳಾದ ಸೆಣಬು, ಡಯಾಂಚ, ವೆಲ್ವೆಟ್ ಬೀನ್ಸ್, ಹುರಳಿ
ಮುಂತಾದವುಗಳನ್ನು ಹೊದಿಕೆ ಬೆಳೆಗಳಾಗಿ ಬೆಳೆಯಬೇಕು. ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗೆ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಂಪರ್ಕದಲ್ಲಿರಬೇಕೆಂದು ಪ್ರಕಟಣೆಯಲ್ಲಿ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ತಿಳಿಸಿದ್ದಾರೆ.


