ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಠದಲ್ಲಿ ಯಾವುದೇ ಸಭೆ, ಸಮಾರಂಭ ಹಾಗೂ ಸುದ್ದಿಗೋಷ್ಠಿ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಿದೆ. ಗೇಟ್ ಗೆ ನಿಷೇಧಾಜ್ಞೆ ಬ್ಯಾನರ್ ಹಾಕಲಾಗಿದೆ.
ಮಾರ್ಚ್ 10ರಿಂದ ಪೀಠದಲ್ಲಿ ಎರಡೂ ಗುಂಪಿನ ಬೆಂಬಲಿಗರಿಂದ ನಿರಂತರವಾಗಿ ಸಭೆಗಳು, ಸಮಾರಂಭಗಳು ಹಾಗೂ ಸುದ್ದಿಗೋಷ್ಠಿಗಳು ನಡೆಯುತ್ತಿದ್ದು, ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ತಿಳಿಸಿದೆ.
ಮಠದಲ್ಲಿ ಗಲಾಟೆಗಳು, ಪ್ರಚೋದನಕಾರಿ ಹೇಳಿಕೆಗಳು ಹೆಚ್ಚುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕ ಎದುರಾಗಿದೆ.ಪದೇ ಪದೇ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವುದು ಸಾಧ್ಯವಿಲ್ಲದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಪತ್ರಿಕಾಗೋಷ್ಠಿ ನಡೆಸದಂತೆ ಆದೇಶಿಸಲಾಗಿದೆ.
ಈ ಕುರಿತು ಸ್ವಾಮೀಜಿ, ಟ್ರಸ್ಟಿಗಳು ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು, ಮೇ 1ರಿಂದ ಮೇ 30ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇಂದು ಸಹ ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ‘ಲೆಕ್ಕಕೊಡಿ ಅಭಿಯಾನ’ ಹಮ್ಮಿಕೊಳ್ಳಲು ಮುಂದಾಗಿದ್ದರು.
ಏಪ್ರಿಲ್ 27ರಂದು ಟ್ರಸ್ಟಿಗಳು ನೀಡಿರುವ ಲೆಕ್ಕಪತ್ರ ಸುಳ್ಳು ಎಂದು ಆರೋಪಿಸಿರುವ ಬೆಂಬಲಿಗರು, ಪಾರದರ್ಶಕ ಲೆಕ್ಕ ಮಂಡನೆ ಮಾಡುವಂತೆ ಒತ್ತಾಯಿಸಲು ಸಿದ್ಧತೆ ನಡೆಸಿದ್ದರು. ಇದೇ ವೇಳೆ, ಗ್ರಾಮದಿಂದ ಗ್ರಾಮಕ್ಕೆ ತೆರಳಿ ಭಕ್ತರು ನೀಡಿರುವ ಕಾಣಿಕೆಗಳ ವಿವರ ಸಂಗ್ರಹಿಸಿ ಪಟ್ಟಿ ಮಾಡುವ ಯೋಜನೆಯನ್ನೂ ಸ್ವಾಮೀಜಿ ಬೆಂಬಲಿಗರು ರೂಪಿಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದೆ.



