ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ರ ಅನ್ವಯ ನಗರದ ಸ್ವಚ್ಛತೆಯನ್ನು ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಮುಂಬರುವ ‘ಸ್ವಚ್ಛ ಸರ್ವೇಕ್ಷಣೆ-2025-26‘ರಲ್ಲಿ ನಗರಕ್ಕೆ ಉತ್ತಮ ಶ್ರೇಯಾಂಕ ದೊರಕಿಸಿಕೊಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ದಾವಣಗೆರೆ: ನೋಂದಾಯಿತ ರೈತರಿಗೆ ಮೇ 5ರವರೆಗೆ ರಾಗಿ ಮಾರಾಟಕ್ಕೆ ಅಂತಿಮ ಅವಕಾಶ
ತ್ಯಾಜ್ಯ ನಿರ್ವಹಣೆಯ ಪ್ರಗತಿ: ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಅಂದಾಜು 190 ಟನ್ ತ್ಯಾಜ್ಯವನ್ನು 102 ಆಟೋ ಟಿಪ್ಪರ್ಗಳು, 30 ಟ್ರ್ಯಾಕ್ಟರ್ಗಳು ಹಾಗೂ 11 ಕಾಂಪ್ಯಾಕ್ಟರ್ಗಳ ಮೂಲಕ ಸಂಗ್ರಹಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ ಸಂಗ್ರಹಿಸಿದ ಹಸಿ ತ್ಯಾಜ್ಯದಿಂದ 4,195 ಟನ್ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸಲಾಗಿದೆ. ಅಲ್ಲದೆ, ಒಣಕಸದಿಂದ 4,860 ಟನ್ ಆರ್.ಡಿ.ಎಫ್ (RDF) ತಯಾರಿಸಿ ಸಿಮೆಂಟ್ ಕಾರ್ಖಾನೆಗೆ ವಿಲೇವಾರಿಗಾಗಿ ಕಳುಹಿಸಲಾಗಿದೆ. ಅಸಂಘಟಿತ ವಲಯದ ಮೂಲಕ ಸುಮಾರು 4,000 ಟನ್ಗೂ ಅಧಿಕ ಮರುಬಳಕೆ ತ್ಯಾಜ್ಯಗಳನ್ನು ರಿಸೈಕ್ಲಿಂಗ್ಗೆ ಕಳುಹಿಸುವ ಮೂಲಕ ಮಾದರಿ ಸಾಧನೆ ಮಾಡಲಾಗಿದೆ.
ಸಾರ್ವಜನಿಕರಿಗೆ ಮನವಿ: ಕೇಂದ್ರ ಸರ್ಕಾರವು ಮೇ ತಿಂಗಳಿನಿಂದ ನಗರದ ಸ್ವಚ್ಛತೆ ಕುರಿತು ಕ್ಷೇತ್ರ ಪರಿಶೀಲನೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯನ್ನು ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ಮನೆಯಲ್ಲಿಯೇ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಎಂದು ಮೂರು ವಿಧಗಳಲ್ಲಿ ವಿಂಗಡಿಸಬೇಕು. ಮನೆಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳನ್ನು ತ್ಯಾಜ್ಯ ಮುಕ್ತವಾಗಿಡಲು ಸಹಕರಿಸಬೇಕು.
ನಗರದ ಸ್ವಚ್ಛತೆ ಬಗ್ಗೆ http://www.cf.sbmurban.org ಜಾಲತಾಣದ ಮೂಲಕ ಅಥವಾ ಕಛೇರಿಗಳಲ್ಲಿ ನೀಡಲಾದ QR ಕೋಡ್ ಸ್ಕ್ಯಾನ್ ಮಾಡಿ ತಮ್ಮ ಧನಾತ್ಮಕ ಅನಿಸಿಕೆಗಳನ್ನು (Citizen Feedback) ಹಂಚಿಕೊಳ್ಳಬೇಕು.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಈ ಬಾರಿಯೂ ದಾವಣಗೆರೆ ನಗರವು ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆಯಲು ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಆಯುಕ್ತರು ತಿಳಿಸಿದ್ದಾರೆ.



