ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಮಪತ್ರ ಹಿಂಪಡೆಯಲು ಕಡೆ ದಿನವಾದ ಇಂದು (ಮಾ.26) ವಿವಿಧ ಪಕ್ಷದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಇಂದು ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಚುನಾವಣಾ ನಿಯಮ 9 (2)ರ ಅನ್ವಯ ನಮೂನೆ-6 ರಲ್ಲಿ ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇದೆ.
- ಆನಂದಪ್ಪ ಎಸ್.ಎಲ್: ಎಸ್.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ
- ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ.
- ಹೆಚ್. ಪರವೇಜ್: ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ
- ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ
- ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು
- ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ
- ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ
- ಎಸ್.ಸಿ. ತ್ರಿಮೂರ್ತಿ: ಬಿ ಕಲಪನಹಳ್ಳಿ, ದಾವಣಗೆರೆ
- ಮಹಮ್ಮದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ
- ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ
- ಡಿ. ಹನುಮಂತಪ್ಪ: ಹರಿಹರ
ಚೆಕ್ಪೋಸ್ಟ್ನಲ್ಲಿ ಜಿಲ್ಲಾಧಿಕಾರಿ ತಪಾಸಣೆ
ಉಪಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಇಂದು ಕೊಂಡಜ್ಜಿ ರಸ್ತೆಯ ಶಿವಪುರ ಚೆಕ್ಪೋಸ್ಟ್ಗೆ ಭೇಟಿ ನೀಡಿ, ವಾಹನ ತಪಾಸಣಾ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿದರು.
ತಪಾಸಣೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಅಕ್ರಮ ಹಣ ಸಾಗಾಟ, ಮದ್ಯದ ಅಕ್ರಮ ಚಟುವಟಿಕೆಗಳು ಹಾಗೂ ಮತದಾರರಿಗೆ ಹಂಚಲು ಸಾಗಿಸುವ ಉಡುಗೊರೆಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಆದೇಶಿಸಿದರು. ನಿಯೋಜನೆಗೊಂಡಿರುವ ಸಿಬ್ಬಂದಿಯು ವಾಹನಗಳನ್ನು ತಪಾಸಣೆ ಮಾಡುವ ವಿಧಾನವನ್ನು ಪರಿಶೀಲಿಸಿದ ಅವರು, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



