ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ಅಧ್ಯಕ್ಷ ಜಿ.ಬಿ.ವಿನಯ್ಕುಮಾರ್ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಅಂತ್ಯಕ್ಕೆ ಪಣ ತೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯಿಂದ ಇಂದು ಶ್ರೀನಿವಾಸ ದಾಸಕರಿಯಪ್ಪ ನಾಮಪತ್ರ ಸಲ್ಲಿಸಲು ನಡೆಯುವ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಕುಟುಂಬ ರಾಜಕಾರಣ ಅಂತ್ಯ ಹಾಡಬೇಕು
ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು. ರಾಜಕಾರಣಕ್ಕೆ ಹೊಸಬರಿಗೆ ಅವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಅಂತ್ಯ ಹಾಡಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ಆತ್ಮೀಯ ಸ್ನೇಹಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪರ ಚುನಾವಣಾ ಪ್ರಚಾರವನ್ನೂ ‘ಸ್ವಾಭಿಮಾನಿ ಬಳಗ’ದಿಂದ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರ ದಾಹಿಗಳು
ಜಿಲ್ಲೆಯಲ್ಲಿ ಅಧಿಕಾರ ಹಿಡಿದವರು ಎಲ್ಲವೂ ನಮ್ಮ ಕುಟುಂಬಕ್ಕೆ ಬೇಕು ಎಂಬ ಅಧಿಕಾರ ದಾಹಿಗಳಾಗಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ನೋಡುವುದಕ್ಕೆ ಸಿಂಪಲ್ ಆಗಿ ಕಂಡರೂ ಅವರ ಒಳ ಮನಸಿನಲ್ಲಿ ಅಧಿಕಾರ ದಾಹ ಇದೆ ಎಂದು ಕಿಡಿಕಾರಿದ್ದಾರೆ.
‘ನಾನು ಸ್ವತಂತ್ರವಾಗಿ ಸ್ಪರ್ಧಿಸಿದರೆ ಹಿಂದೂಗಳ ಮತಗಳು ವಿಭಜನೆಯಾಗಲಿವೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಕುಟುಂಬ ರಾಜಕಾರಣದ ವಿರುದ್ಧ ನನ್ನ ನಿಲುವು ಗಟ್ಟಿಯಾಗಿದೆ. ಹೀಗಾಗಿ ಯಾವುದೇ ಷರತ್ತುಗಳಿಲ್ಲದೇ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಬೆಂಬಲಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ದಾವಣಗೆರೆ: ವಿಮಾನ ಕೆಳಗಡೆ ಹಾರಿದ ಅನುಭವ ನಿಮಗೂ ಆಗಿದೆಯಾ..? ಕಾರಣ ಏನು..?
ಸರ್ವಾಧಿಕಾರಿ ಧೋರಣೆಗೆ ಮತದಾರರು ಪಾಠ ಕಲಿಸಿ
‘ದಾವಣಗೆರೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಒಂದೇ ಮನೆಯಲ್ಲಿ ಸಚಿವರು, ಸಂಸದರು ಇದ್ದಾರೆ. ಆದರೂ, ಅದೇ ಕುಟುಂಬದವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಅಧಿಕಾರದ ದಾಹ, ದುರಂಹಕಾರ, ಸರ್ವಾಧಿಕಾರಿ ಧೋರಣೆಗೆ ಮತದಾರರು ಪಾಠ ಕಲಿಸಬೇಕಿದೆ ಎಂದರು.
ಹಣ, ಆಮಿಷಗಳಿಗೆ ಮತದಾರರು ಬಲಿಯಾಗಬಾರದು
ಹಣ, ಆಮಿಷಗಳಿಗೆ ಮತದಾರರು ಬಲಿಯಾಗಬಾರದು. ಚುನಾವಣೆಯಲ್ಲಿ ಪೊಲೀಸರ ಕಣ್ಗಾವಲಿನಲ್ಲೇ ಹಣ ಹಂಚುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಈ ಬಾರಿ ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಬಿಜೆಪಿ ಟಿಕೆಟ್ ನೀಡುವುದಾಗಿ ಆ ಪಕ್ಷದ ವರಿಷ್ಠರು ತಿಳಿಸಿದ್ದರು. ಅಂತಿಮ ಹಂತದಲ್ಲಿ ನನಗೆ ಟಿಕೆಟ್ ಕೈತಪ್ಪಿತು. ಆದರೆ, ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ದೊರೆತಿರುವುದು ಖುಷಿಯ ವಿಚಾರ. ಹೀಗಾಗಿ ಅವರ ಗೆಲುವಿಗೆ ಸಹಕಾರ ನೀಡುವುದಾಗಿ ತಿಳಿಸಿದರು.



