ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸರ್ಮರ್ಥ್ ಮಲ್ಲಿಕಾರ್ಜುನ ಶಾಮನೂರು ಟಿಕೆಟ್ ಖಚಿತವಾಗಿದೆ. ಇಂದು ಅಧಿಕೃತವಾಗಿ ಘೋಷಣೆಯಾಲಿದೆ. ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಟಿಕೆಟ್ ಹಂಚಿಕೆ ಬಗ್ಗೆ ಶನಿವಾರ ಸರಣಿ ಸಭೆಗಳ ಬಳಿಕ ಅಂತಿಮಗೊಳಿಸಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನಿಂದ ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಬಿ ಫಾರಂ ನೀಡಲಾಗಿದೆ. ಅವರು ಸೋಮವಾರ (ಮಾ.23) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಅಲ್ಪಸಂಖ್ಯಾತರ ತೀವ್ರ ವಿರೋಧದ ನಡುವೆಯೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಗೆ ಅಲ್ಪಸಂಖ್ಯಾತರು ಶಾಮನೂರು ಕುಟುಂಬ ನಡುವೆ ತೀವ್ರ ಪೈಪೋಟಿ
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿತ್ತು. ಅಲ್ಪಸಂಖ್ಯಾತರ ಬಲ ಹೆಚ್ಚಾಗಿರುವ ಕ್ಷೇತ್ರದಲ್ಲಿ ಶತಾಯಗತಾಯ ನಮಗೇ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತರು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಸಮರ್ಥ್ ಶಾಮನೂರು ಬಿ-ಫಾರಂ ಇಲ್ಲದೆಯೇ ನಾಮಪತ್ರವನ್ನೂ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಾಧಿಕ್ ಪೈಲ್ವಾನ್ ಎಂಬುವವರೂ ನಾಮಪತ್ರ ಸಲ್ಲಿಸಿದ್ದರು. ಇದು ಶಾಮನೂರು ಕುಟುಂಬ ಹಾಗೂ ಅಲ್ಪಸಂಖ್ಯಾತರ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿತ್ತು.
ಕುಟುಂಬ ರಾಜಕಾರಣಕ್ಕೆ ಜೈ ಎಂದ ಕಾಂಗ್ರೆಸ್
ಈ ತಿಕ್ಕಾಟ ಬಗೆಹರಿಸಲು ಶುಕ್ರವಾರ ಕಸರತ್ತು ನಡೆಸಿದ ಕಾಂಗ್ರೆಸ್ ನಾಯಕರು ಶನಿವಾರವೂ ಸರಣಿ ಸಭೆ ನಡೆಸಿದರು. ಅಂತಿಮವಾಗಿ ಶನಿವಾರ ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಸಭೆ ನಡೆಸಿ ಮನವೊಲಿಸಿದ್ದಾರೆ. ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಕುಟುಂಬ ರಾಜಕಾರಣಕ್ಕೆ ಜೈ ಎಂದಿದೆ. ಒಂದೇ ಮನೆಯಲ್ಲಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಈಗ ಮಗನಿಗೆ ಉಪ ಚುನಾವಣೆ ಟಿಕೆಟ್ ಘೋಷಣೆ ಮಾಡಿದೆ.
ಅಲ್ಪಸಂಖ್ಯಾತರ ಮನವೊಲಿಕೆ
ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಟಿಕೆಟ್ ನೀಡುವುದು ರೂಢಿ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಿಗೆ ಟಿಕೆಟ್ ನೀಡಬೇಕು. ಇದಕ್ಕೆ ನೀವೆಲ್ಲಾ ಸಹಕರಿಸಬೇಕು ಎಂದು ಅಲ್ಪಸಂಖ್ಯಾತ ನಾಯಕರ ಮನವೊಲಿಸಿದರು ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ನ್ಯಾಯಯುತ ಬೇಡಿಕೆ ಆದರೂ ದಶಕಗಳಿಂದ ಶಾಮನೂರು ಅವರು ಪಕ್ಷಕ್ಕೆ ಸೇವೆ ಮಾಡಿದ್ದಾರೆ. ದೇಶದ ಅತಿ ಹಿರಿಯ ಶಾಸಕರಾಗಿದ್ದ ಶಾಮನೂರು ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಕುಟುಂಬದವರಿಗೆ ಟಿಕೆಟ್ ನೀಡುವುದು ಗೌರವ. ಮುಂದಿನದ್ದನ್ನು ಎರಡೂವರೆ ವರ್ಷದ ಬಳಿಕ ನೋಡೋಣ. ಸದ್ಯಕ್ಕೆ ಎಲ್ಲರೂ ಒಟ್ಟಾಗಿ ಚುನಾವಣೆ ನಡೆಸಿ ಎಂದು ಸೂಚನೆ ನೀಡಲಾಗಿದೆ.



