ಭದ್ರಾವತಿ: ರಾಜಕೀಯ ಅಖಾಡದಲ್ಲಿ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾವು ಮುಂಗುಸಿಯಂತೆ. ಇಂದು ಎಲ್ಲರೂ ಒಟ್ಟಿಗೆ ಸಿಕ್ಕಿದ್ದಾರೆ. ಇವರ ರಾಜಕೀಯ ವೈಮನಸ್ಸು ನೋಡಿ ನಮಗೂ ಸಾಕಾಗಿದೆ. ಅದಕ್ಕೇ ಕುಟುಂಬಗಳಲ್ಲಿ ಮದುವೆ ಮಾಡಿಸಿ ಬಿಡೋಣ ಎಂದು ಯೋಚಿಸಿದ್ದೇವೆ. ಆಗಲಾದರೂ ಇವರ ಜಗಳ ನಿಲ್ಲಬಹುದು ಎಂದು ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಸ್ಯ ಚಟಾಕಿ ಹಾರಿಸಿದರು. ಆಗ ನೆರೆದಿದ್ದ ಭಕ್ತರು ನಗೆಯ ಅಲೆಯಲ್ಲಿ ತೇಲಿದರು.

ಎರಡು ಕುಟುಂಬ ನಡುವೆ ಮದುವೆ ಮಾಡಿಸುವುದೇ ಲೇಸು
ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆಯ ವೇದಿಕೆಯಲ್ಲಿ ಮಾತನಾಡಿ,ಮಾಜಿ ಸಂಸದ ಸಿದ್ದೇಶ್ವರ ಮತ್ತು ಸಚಿವ ಮಲ್ಲಿಕಾರ್ಜುನ್ ದಕ್ಷಿಣ ಹಾಗೂ ಉತ್ತರ ಧ್ರುವಗಳಿದ್ದಂತೆ. ಇವರ ನಡುವಿನ ರಾಜಕೀಯ ಜಿದ್ದಾಜಿದ್ದನ್ನು ನೋಡುತ್ತಿದ್ದರೆ, ಎರಡೂ ಮನೆತನದ ಮಕ್ಕಳ ನಡುವೆ ಮದುವೆ ಮಾಡಿಸಿ ಸಂಬಂಧ ಬೆಳೆಸುವುದೇ ಲೇಸು ಎಂದು ತಿಳಿಸಿದರು.
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಆಪ್ತ ಪುತ್ರನ ವಿರುದ್ಧ 2 ಠಾಣೆಯಲ್ಲಿ 4 ಪ್ರಕರಣ ದಾಖಲು-ಇಬ್ಬರು ಆರೋಪಿಗಳ ಬಂಧನ
ಭಿನ್ನಾಭಿಪ್ರಾಯಗಳಿದ್ದರೆ ಖಾಸಗಿಯಾಗಿ ಕುಳಿತು ಬಗೆಹರಿಸಿಕೊಳ್ಳಿ
ಸಿದ್ದೇಶ್ವರ ಮತ್ತು ಮಲ್ಲಿಕಾರ್ಜುನ್ ಸಂಬಂಧದಲ್ಲಿ ಮಾವ-ಅಳಿಯಂದಿರು. ಮಹಾಭಾರತದಲ್ಲಿ ಪಾಂಡವರು-ಕೌರವರು ಸಂಬಂಧಿಕರಾಗಿದ್ದರೂ ಹೇಗೆ ಹೊಡೆದಾಡಿದರೋ, ಇವರ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಇವರು ಶತ್ರುಗಳಲ್ಲ. ಇನ್ನು ಮುಂದೆ ವೈಯಕ್ತಿಕ ಟೀಕೆ ಬಿಟ್ಟು, ಭಿನ್ನಾಭಿಪ್ರಾಯಗಳಿದ್ದರೆ ಖಾಸಗಿಯಾಗಿ ಕುಳಿತು ಬಗೆಹರಿಸಿಕೊಳ್ಳಿ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಬಿ.ಪಿ. ಹರೀಶ್ ಗೆ ಶ್ರೀಗಳು ಕಿವಿಮಾತು ಹೇಳಿದರು.

ಇದೇ ವೇಳೆ ಶಾಸಕ ಬಿ.ಪಿ. ಹರೀಶ್ ಅವರಿಗೂ ಎಚ್ಚರಿಕೆ ನೀಡಿದ ಶ್ರೀಗಳು, ನಿಮ್ಮ ಟೀಕೆಗಳ ಬಗ್ಗೆ ಪ್ರಭಾ ಮಲ್ಲಿಕಾರ್ಜುನ್ ವಾಟ್ಸಾಪ್ನಲ್ಲಿ ತೋರಿಸಿದ್ದಾರೆ. ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದರು. ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಅವಹೇಳನಕಾರಿ ಮತ್ತು ವ್ಯಕ್ತಿತ್ವ ಹರಣ ಮಾಡುವಂತಹ ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ತರಳಬಾಳು ಜಗದ್ಗುರುಗಳು, ಈ ಬಗ್ಗೆ ಸಚಿವ ಹೆಚ್.ಕೆ. ಪಾಟೀಲ್ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.
ವಾಟ್ಸಾಪ್ಗಳಿಗೂ ನೀತಿ ಸಂಹಿತೆ ಬೇಕು
ಪತ್ರಿಕೆಗಳಿಗೆ ಇರುವಂತೆ ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ವಾಟ್ಸಾಪ್ಗಳಿಗೂ ನಿರ್ದಿಷ್ಟ ಎಥಿಕ್ಸ್ ಅಥವಾ ನೀತಿ ಸಂಹಿತೆ ಇರಬೇಕು. ಸಮಾಜದಲ್ಲಿ ಅನೇಕ ಸಂಸಾರಗಳು ವಾಟ್ಸಾಪ್ನಿಂದಾಗಿ ಹದಗೆಡುತ್ತಿವೆ. ಕೆಟ್ಟ ಶಬ್ದಗಳ ಬಳಕೆ ಮತ್ತು ಆಧಾರ ರಹಿತ ಆರೋಪಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಬಿಲ್ ತರುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರ ಅಂತಹ ಬಿಲ್ ತಂದಲ್ಲಿ ವಿರೋಧ ಪಕ್ಷದವರಾಗಿ ನೀವು ಅದನ್ನು ಸಪೋರ್ಟ್ ಮಾಡಬೇಕು ಎಂದು ಶಾಸಕ ಬಿ.ಪಿ. ಹರೀಶ್ಗೆ ಸಲಹೆ ನೀಡಿದ ಶ್ರೀಗಳು, ವೈಯಕ್ತಿಕ ನಿಂದನೆ ಮತ್ತು ಸುಳ್ಳು ಸುದ್ದಿಗಳ ಹಾವಳಿ ತಪ್ಪಿಸಲು ರಾಜಕೀಯ ಮರೆತು ಸಹಕರಿಸುವುದು ಮುಖ್ಯ ಎಂದರು.
ಕೊನೆಯಲ್ಲಿ ಸಿದ್ದೇಶ್ವರ, ಮಲ್ಲಿಕಾರ್ಜುನ್ ಹಾಗೂ ಹರೀಶ್ ಮೂವರಿಂದಲೂ ಪಾದಕ್ಕೆ ನಮಸ್ಕಾರ ಮಾಡಿಸಿಕೊಂಡ ಶ್ರೀಗಳು, ಪರಸ್ಪರ ನಿಂದನೆ ಕೈಬಿಡುವಂತೆ ಸೂಚಿಸಿ ಭದ್ರಾವತಿ ತರಳಬಾಳು ಹುಣ್ಣಿಮೆ ನಿಜವಾಗಿಯೂ ಯಶಸ್ವಿಯಾಯಿತು ಎಂದು ಘೋಷಿಸಿದರು.



