Connect with us

Dvgsuddi Kannada | online news portal | Kannada news online

ದಾವಣಗೆರೆ: ಪೋಕ್ಸೋ 60 ಸಂತ್ರಸ್ಥರಿಗೆ 50.45 ಲಕ್ಷ ಪರಿಹಾರ; ಸುಳ್ಳು ಪ್ರಕರಣದಲ್ಲಿ ಪರಿಹಾರ ಮರಳಿಸಲು ಕೋರ್ಟ್ ಆದೇಶ

dvg dc 2

ದಾವಣಗೆರೆ

ದಾವಣಗೆರೆ: ಪೋಕ್ಸೋ 60 ಸಂತ್ರಸ್ಥರಿಗೆ 50.45 ಲಕ್ಷ ಪರಿಹಾರ; ಸುಳ್ಳು ಪ್ರಕರಣದಲ್ಲಿ ಪರಿಹಾರ ಮರಳಿಸಲು ಕೋರ್ಟ್ ಆದೇಶ

ದಾವಣಗೆರೆ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದರ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ 2025 ರ ಜನವರಿಯಿಂದ ಜೂನ್ 25 ರ ವರೆಗೆ 32 ಪ್ರಕರಣಗಳು ದಾಖಲಾಗಿದ್ದು 60 ಸಂತ್ರಸ್ಥರಿಗೆ ರೂ.50.45 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ 1 ಕೊಲೆ, 4 ಪೋಕ್ಸೋ ಪ್ರಕರಣ, 27 ಇತರೆ ದೌರ್ಜನ್ಯ ಪ್ರಕರಣಗಳು ಸೇರಿವೆ. ಇದರಲ್ಲಿ 6 ಜಾರ್ಚ್‍ಶೀಟ್ ಹಂತದಲ್ಲಿವೆ. ಸಂತ್ರಸ್ಥರಿಗೆ ಎಫ್‍ಐಆರ್ ಹಂತದಲ್ಲಿ ರೂ.37.95 ಲಕ್ಷ, ಚಾರ್ಜ್‍ಶೀಟ್ ಹಂತದಲ್ಲಿ 12 ಲಕ್ಷ ಪರಿಹಾರ ನೀಡಿದ್ದು ಇದರಲ್ಲಿ 42 ಪರಿಶಿಷ್ಟ ಜಾತಿ ಮತ್ತು 18 ಪರಿಶಿಷ್ಟ ಪಂಗಡದ ಸಂತ್ರಸ್ಥರಿದ್ದಾರೆ ಎಂದರು.

ಈ ಹಿಂದೆ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗಿದ್ದ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಪೋಕ್ಸೋದಡಿ ದಾಖಲಾಗಿ ರೂ.1.5 ಲಕ್ಷ ಪರಿಹಾರವನ್ನು ಬಾಲಕಿಯ ಕುಟುಂಬದವರಿಗೆ ನೀಡಲಾಗಿತ್ತು. ಬಾಲಕಿಗೆ 18 ವರ್ಷ ತುಂಬಿರದ ಕಾರಣ ಹುಡುಗನನ್ನು ಪೋಕ್ಸೋದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. 18 ವರ್ಷದ ನಂತರ ಹುಡುಗ ಮತ್ತು ಹುಡುಗಿಗೆ ಕುಟುಂಬದವರ ರಾಜಿ ಸಂಧಾನದ ಮೂಲಕ ಮದುವೆ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖಾ ವರದಿಯ ಬಿ.ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದನ್ನು ಪರಿಶೀಲಿಸಿ ಪೋಕ್ಸೋ ಪ್ರಕರಣ ಸಾಬೀತಾಗದ ಕಾರಣ ಪಡೆಯಲಾಗಿದ್ದ ಪರಿಹಾರದ ಮೊತ್ತವನ್ನು ವಾಪಸ್ ನೀಡಲು ಕೋರ್ಟ್ ಆದೇಶಿಸಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

ತಾಲ್ಲೂಕುವಾರು ಪೋಕ್ಸೋ ಪ್ರಕರಣ ವಿವರ

2025 ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಮಾರ್ಚ್‍ನಲ್ಲಿ ದಾವಣಗೆರೆ ತಾ; 10, ಹರಿಹರ 1, ಹೊನ್ನಾಳಿ 1, ಚನ್ನಗಿರಿ 3 ಪ್ರಕರಣ, ಏಪ್ರಿಲ್ ನಲ್ಲಿ ದಾವಣಗೆರೆ 4, ಹರಿಹರ 1, ಹೊನ್ನಾಳಿ 1, ನ್ಯಾಮತಿ 1, ಚನ್ನಗಿರಿ 2, ಮೇ ತಿಂಗಳಲ್ಲಿ ದಾವಣಗೆರೆ 2, ಚನ್ನಗಿರಿ 2, ಜೂನ್‍ನಲ್ಲಿ ದಾವಣಗೆರೆ 3, ಚನ್ನಗಿರಿ 1 ಪ್ರಕರಣ ಸೇರಿ ಒಟ್ಟು 32 ದೌರ್ಜನ್ಯ ಪ್ರಕರಣಗಳಲ್ಲಿ 11 ಪ್ರಕರಣ ವಿಚಾರಣೆ ಹಂತ ಮತ್ತು 2 ಬಿ.ರಿಪೋರ್ಟ್, 17 ತನಿಖಾ ಹಂತದಲ್ಲಿವೆ.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು

2025 ರ ಏಪ್ರಿಲ್ ನಲ್ಲಿ 138 ಬಾಕಿ ಇದ್ದ ಪ್ರಕರಣಗಳ ಜೊತೆಗೆ 7 ಹೊಸ ಪ್ರಕರಣಗಳು, ಇದರಲ್ಲಿ 1 ರಲ್ಲಿ ಬಿಡುಗಡೆಯಾಗಿದೆ. ಮೇ ತಿಂಗಳಲ್ಲಿ 144 ಪ್ರಕರಣಗಳೊಂದಿಗೆ 4 ಹೊಸ ಪ್ರಕರಣಗಳು ಸೇರಿ 148 ರಲ್ಲಿ 5 ರಲ್ಲಿ ಬಿಡುಗಡೆಯಾಗಿದೆ. ಜೂನ್ ನಲ್ಲಿ 143 ಪ್ರಕರಣಗಳೊಂದಿಗೆ 6 ಹೊಸ ಪ್ರಕರಣಗಳು ಸೇರಿ 149 ರಲ್ಲಿ 2 ರಲ್ಲಿ ಶಿಕ್ಷೆಯಾಗಿದ್ದು 1 ಬಿಡುಗಡೆಯಾಗಿತ್ತು. ಬಾಕಿ 146 ಪ್ರಕರಣಗಳು ನ್ಯಾಯಾಲದಲ್ಲಿವೆ. ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಹೆಚ್ಚು ಶಿಕ್ಷೆಯಾಗುವಂತೆ ಇದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಒದಗಿಸಲು ತನಿಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ನ್ಯಾಯಾಲದಲ್ಲಿ ಬಾಕಿ ಇರುವ 146 ಪ್ರಕರಣಗಳಲ್ಲಿ 2019 ರ 2, 2020 ರ14, 2021 ರ 7, 2022 ರಲ್ಲಿನ 22, 2023 ರಲ್ಲಿನ 47, 2024 ರಲ್ಲಿ ನಡೆದ 33 ಪ್ರಕರಣಗಳು ಸೇರಿದಂತೆ 2025 ರಲ್ಲಿನ 21 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದು ಸರ್ಕಾರಿ ಅಭಿಯೋಜಕರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಹುಲಿಮನಿ ತಿಮ್ಮಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪಾಲಿಕೆ ಆಯುಕ್ತ ರೇಣುಕಾ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ಸದಸ್ಯರಾದ ಕುಂದುವಾಡ ಮಂಜುನಾಥ, ಬಿ.ಎನ್.ಉಮಾ, ಅವರಗೆರೆ ವಾಸು, ಬಾಬಣ್ಣ ಡಿ.ಎಸ್, ಅಣಜಿ ಅಂಜಿನಪ್ಪ, ಡಾ. ಅರವಿಂದನ್ ಪಿ.ಎಸ್, ಪಿ.ಎಂ.ನಾಗರಾಜ, ರೆಹಮತ್ ಉರ್ ರೆಹಮಾನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top