ಚಿತ್ರದುರ್ಗ: ರಾಜ್ಯದಲ್ಲಿ ಬೇಡ ಜಂಗಮ ಜಾತಿಯೇ ಇಲ್ಲ . ಕೆಲವೆಡೆ ಮಾತ್ರ ಬುಡ್ಡ ಜಂಗಮರಿದ್ದಾರೆ. ಆದರೆ, ವೀರಶೈವ ಜಂಗಮರು, ಜಾತಿ ಸಮೀಕ್ಷೆಯಲ್ಲಿ ಬೇಡ ಜಂಗಮರೆಂದು ಸುಳ್ಳು ಮಾಹಿತಿ ದಾಖಲಿಸಿ ಗೊಂದಲ ಸೃಷ್ಠಿಸುತ್ತಿದ್ದಾರೆಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಸಮೀಕ್ಷೆಯಲ್ಲಿ ಬಹಳಷ್ಟು ವೀರಶೈವ ಜಂಗಮರು, ತಾವು ಬೇಡ ಜಂಗಮರು ಎಂದು ಬರೆಸುತ್ತಿದ್ದಾರೆ. ಅಂಥವರ ವಿರುದ್ಧ ನ್ಯಾ.ನಾಗಮೋಹನ್ ದಾಸ್ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು. ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸಿರುವ ತಹಶೀಲ್ದಾರ್ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ಕೈಬಿಡಲು ಮುಖ್ಯಮಂತ್ರಿ ಮುಂದಾಗಬೇಕು. ಈ ಕಾರ್ಯಕ್ಕೆ ಎಲ್ಲ ಪಕ್ಷಗಳು ಕೈಜೋಡಿಸಬೇಕು. ಆಂಧ್ರಪ್ರದೇಶದಿಂದ ವಲಸೆ ಬಂದ ಬೇಡ ಜಂಗಮರು ಸತ್ತ ಹಂದಿ-ದನದ ಮಾಂಸ ತಿನ್ನುತ್ತಾರೆ. ಮದ್ಯ ಸಹ ಸೇವಿಸುತ್ತಾರೆ. ಮಾದಿಗರ ಬಳಿಯೂ ಬೇಡಿಕೊಂಡು ತಿನ್ನುತ್ತಾರೆ. ಬೇಡ ಜಂಗಮರು ರಾಜ್ಯದಲ್ಲಿ ಈಗ ಎಲ್ಲಿಯೂ ಇಲ್ಲ ಎಂದರು.



