ಡಿವಿಜಿ ಸುದ್ದಿ, ದಾವಣಗೆರೆ: ಕೆಲಸ ಮಾಡುವ ಗುರಿ ಇಟ್ಟುಕೊಂಡು ಬಂದಿದ್ದೇನೆ. ನಿಮ್ಮ ಯಾವುದೇ ಕೆಲಸವಿದ್ದರೆ ಕರೆಯಿರಿ. ಅಭಿನಂದನೆ ಸಮಾರಂಭಕ್ಕೆ ಮಾತ್ರ ಕರಿಬೇಡಿ ಎಂದು ದಾವಣಗೆರೆಯ ನೂತನ ಮೇಯರ್ ಅಜಯ್ ಕುಮಾರ್ ಹೇಳಿದರು.

ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನೂತನ ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದುವರಿಗೆ ಪಾಲಿಕೆ ಸದಸ್ಯ ಮಾತ್ರ ಆಗಿದ್ದೆ. ಈಗ ಮೇಯರ್ ಆಗಿದ್ದೇನೆ. ಜವಾಬ್ದಾರಿ ಹೆಚ್ಚಿದೆ. ಪಕ್ಷ ಕೊಟ್ಟಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ನನಗೆ ಒಂದು ವರ್ಷ ಅವಧಿ ಇದೆ. ಈ ಅವಧಿಯಲ್ಲಿ ಎಷ್ಟು ಕೆಲಸ ಮಾಡು ಸಾಧ್ಯವಿದೆಯೋ ಅಷ್ಟು ಮಾಡುತ್ತೇನೆ. ಹೀಗಾಗಿ ಸಭೆ, ಸಮಾರಂಭಕ್ಕೆ ಕರೆಯದೇ ಕೆಲಸವಿದ್ರೆ ಕರೆಯಿರಿ ಎಂದರು.

ಬಿಜೆಪಿ ದೊಡ್ಡ ಪಕ್ಷ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನೆಡೆಯುತ್ತಿದೆ. ನಾವು ಅವರ ಸಮನಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯನ್ನುಸಂಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ ಎಂದರು.
ನಾವು ಯಾರು ಕೂಡ, ಯಾರಿಗೂ ದುಡ್ಡು ಕೊಟ್ಟಿಲ್ಲ. ಅಪಹರಣ ಮಾಡಿಲ್ಲ. ವಿರೋಧ ಪಕ್ಷದ ಸೋತದಾಗ ಆರೋಪ ಮಾಡುವುದು ಸಹಜ. ಹೀಗಾಗಿ ಕಾಂಗ್ರೆಸ್ ಆರೋಪ ಮಾಡಿದೆ. ಅವರ ಆರೋಪದಲ್ಲಿ ಹುರುಳಿಲ್ಲ. ಅವರಿಗೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶವಿದೆ ಎಂದರು.



