ದಾವಣಗೆರೆ: ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾದ ಘಟನೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಇಂದು (ಫ.02) ನಡೆದಿದೆ.
ಕುರ್ಕಿ ಗ್ರಾಮದ ಪಾಂಡು (16) , ತುರ್ಚಘಟ್ಟ ಗ್ರಾಮದ ಯತೀಂದ್ರ (16) ನೀರುಪಾಲಾದ ಬಾಲಕರು. ಈ ಇಬ್ಬರು ವಿದ್ಯಾರ್ಥಿಗಳು ದಾವಣಗೆರೆಯ ಗುರುಕುಲ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಶಾಲೆಗೆ ರಜೆ ಇದ್ದರಿಂದ ಕಟ್ಟಿಂಗ್ ಮಾಡಿಸಿಕೊಳ್ಳಲು ಇಬ್ಬರು ಕುರ್ಕಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದಲ್ಲಿ ಹಾಯ್ದು ಹೋಗುವ ಭದ್ರಾ ಕಾಲುವೆಯಲ್ಲಿ ಇಬ್ಬರು ಈಜಲು ಬಂದಿದ್ದಾರೆ. ಪಾಂಡುಗೆ ಈಜಲು ಬರುತ್ತಿತ್ತು. ಯತೀಂದ್ರ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಯತೀಂದ್ರ ಜಿಗಿದಿದ್ದಾನೆ. ಯತೀಂದ್ರ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ.
ಬಾಲಕರು ಗೇಟು ಬಳಿ ಈಜಲು ಹೋಗಿದ್ದರಿಂದ ಈ ದುರ್ಘಟನೆ ನಡೆದಿದೆ. ಪಾಂಡು ಮೃತದೇಹ ಪತ್ತೆಯಾಗಿದ್ದು, ಯತೀಂದ್ರನ ಮೃತದೇಹ ಇನ್ನೂ ಸಿಕ್ಕಿಲ್ಲ. ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.



