ದಾವಣಗೆರೆ: ಅಕ್ರಮ ಮರಳು ಸಂಗ್ರಹಣೆ ಮೇಲೆ ಜಿಲ್ಲಾ ಪೊಲೀಸರು ದಾಳಿ ಮಾಡಿದ್ದು, ಅಂದಾಜು 50,000 ಬೆಲೆಯ ಸುಮಾರು 20 ಮೆಟ್ರಿಕ್ ಟನ್ ಮರಳನ್ನು ವಶ ಪಡಿಸಿಕೊಳ್ಳಲಾಗಿದೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮತ್ತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಎಸ್ಪಿ ಉಮಾ
ಪ್ರಶಾಂತ್ , ಎಎಸ್ಪಿ ವಿಜಯಕುಮಾರ್
ಎಂ ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ತಂಡ ಜ.1ರಂದು ಸಂಜೆ 05-00 ಗಂಟೆ ಸಮಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿನಹಾಳ್ ಗ್ರಾಮದ ಬಳಿಯ ಬೈರನಪಾದದ ಹತ್ತಿರದ ತುಂಗಭದ್ರಾ ನದಿ ದಂಡೆಯಲ್ಲಿ ಯಾರೋ ಅಪರಿಚತರು ಮರಳನ್ನು ಅಕ್ರಮವಾಗಿ ಸಾಗಣಿಕೆ ಮಾಡಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಮರಳನ್ನು ಸಂಗ್ರಹಿಸಿಟ್ಟಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿ, ಸುಮಾರು ಅಂದಾಜು 50,000 ಬೆಲೆಯ ಸುಮಾರು 20 ಮೆಟ್ರಿಕ್ ಟನ್ ಮರಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಉಮಾ
ಪ್ರಶಾಂತ್ ಶ್ಲಾಘಿಸಿದ್ದಾರೆ.



