ಶಿವಮೊಗ್ಗ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದದಿಂದ ಬೇಸಿಗೆ ಹಂಗಾಮಿನಲ್ಲಿ ನಿರಂತರ 120 ದಿನ ಎಡದಂಡೆ ಮತ್ತು ಬಲದಂಡೆ ನಾಲೆಯಿಂದ ನೀರು ಹರಿಸಲು ದಿನಾಂಕ ನಿಗದಿಪಡಿಸಲಾಗಿದೆ. ಜ.4ರಿಂದ ಎಡದಂಡೆ ಮತ್ತು ಜ.8ರಿಂದ ಬಲದಂಡೆ ನಾಲೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
- ಜ.4ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ನೀರು
- ಬೇಸಿಗೆ ಹಂಗಾಮಿನಲ್ಲಿ ನಿರಂತರ 120 ದಿನ ನೀರು
- ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆಗೆ 2650 ಕ್ಯೂಸೆಕ್ ಹರಿಯಲಿದೆ
- ಪ್ರಸ್ತುತ 66.964 ಟಿಎಂಸಿ ನೀರಿದ್ದು 32 ಟಿಎಂಸಿ ನೀರು ಹರಿಸಲು ತೀರ್ಮಾನ
ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ ಅಮೆರಿಕದಿಂದ ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಅಧ್ಯಕ್ಷತೆಯಲ್ಲಿ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ನಂತರ ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಪ್ರಸ್ತುತ ಜಲಾಶಯದಲ್ಲಿ 66.964 ಟಿಎಂಸಿ ನೀರು ಸಂಗ್ರಹವಿದೆ. ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ಭದ್ರಾ ಜಲಾಶಯದ ನಾಲೆಗಳಿಗೆ ನಿರಂತರವಾಗಿ 120 ದಿನ ನೀರು ಹರಿಸಲಾಗುತ್ತದೆ. ನಾಲೆಗಳ ಮೂಲಕ ಒಟ್ಟು 32 ಟಿಎಂಸಿ ನೀರು ಹರಿಯಲಿದ್ದು ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆಗೆ 2650 ಕ್ಯೂಸೆಕ್ ನೀರು ಹರಿಸಲಾಗುವುದು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ ಸೂಚಿಸಿದ್ದಾರೆ ಎಂದು ತಿಳಿಸಿದರು.



