ದಾವಣಗೆರೆ: 1.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಮೊಬೈಲ್ ಫೋನ್ ಇದ್ದ ಬ್ಯಾಗ್ ನ್ನು ಮಹಿಳೆ ಆಟೋದಲ್ಲಿಯೇ ಬಿಟ್ಟು ಇಳಿದಿದ್ದರು. ಕಳೆದು ಹೋದ ಸ್ವತ್ತನ್ನು ಪೊಲೀಸ್ ಕಮಾಂಡ್ ಸೆಂಟರ್ ಸಹಾಯದಿಂದ ಪತ್ತೆ ಮಾಡಿ, ಮಹಿಳೆ ಬ್ಯಾಗ್ ನ್ನು ಹಸ್ತಾಂತರಿಸಿದ್ದಾರೆ.
ಜಿಲ್ಲೆಯ ಜಗಳೂರು ತಾಲೂಕಿನ ಸಿದ್ದಯ್ಯನ ಕೋಡೆ ನಿವಾಸಿ ಅಂಜುಬಾನು, ನ.20 ರಂದು ದಾವಣಗೆರೆಗೆ ಬಂದು ಆಟೋದಿಂದ ಇಳಿಯುವಾಗ ಚಿನ್ನಾಭರಣ, ಮೊಬೈಲ್ ಇರುವ ಬ್ಯಾಗನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದರು. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮಣನಾಯ್ಕ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸ್ ತಂಡವು ಅಂಜುಬಾನು ಅವರು ಪ್ರಯಾಣಿಸಿದ ಆಟೋವನ್ನು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಹಾಯದಿಂದ ಪತ್ತೆ ಮಾಡಲಾಗಿದೆ. ಎಸ್ಸೆಸ್ಸೆಂ ನಗರದ ನಿವಾಸಿಯಾಗಿರುವ ಆಟೋ ಚಾಲಕ ಮಹಮ್ಮದ್ ಹುಸೇನ್ ಶೇಕ್ ನಿಂದ ಸ್ವತ್ತನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಂಜುಬಾನುಕಳೆದುಕೊಂಡಿದ್ದ 20 ಗ್ರಾಂ ಬಂಗಾರ ಹಾಗೂ ಇತರೆ ಬೆಳ್ಳಿಯ ಆಭರಣ, 10,000 ನಗದು ಹಾಗೂ ಮೊಬೈಲ್ ಫೋನ್ ಸೇರಿ ಒಟ್ಟು 1,50,000 ರು. ಮೌಲ್ಯದ ಸ್ವತ್ತನ್ನು ಪತ್ತೆ ಮಾಡಿ, ಸ್ವತ್ತಿನ ವಾರಸುದಾರರಾದ ಅಂಜುಬಾನುಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.



