ಬೆಂಗಳೂರು: ನಬಾರ್ಡ್ನಿಂದ ರಾಜ್ಯಕ್ಕೆ ಸಾಲ ನೀಡಿಕೆ ಕಡಿತವಾಗಿದೆ. ಕಳೆದ ಬಾರಿ ರಾಜ್ಯಕ್ಕೆ 5,600 ಕೋಟಿ ರೂ. ಸಾಲ ನೀಡಿದ್ದ ನಬಾರ್ಡ್ (NABARD), ಈ ವರ್ಷ 2,340 ಕೋಟಿ ಸಾಲ ನೀಡಿದೆ. ಸಾಲದ ಪ್ರಮಾಣ ಶೇ.58 ರಷ್ಟು ಕಡಿತವಾಗಿದೆ. ಇದರಿಂದ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವುದು ಕಷ್ಟವಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
- ರಾಜ್ಯಕ್ಕೆ ನಬಾರ್ಡ್ ಸಾಲ ಪ್ರಮಾಣ ಶೇ.58 ಕಡಿತ
- ಕೇಂದ್ರ ಸರ್ಕಾರ ವಿರುದ್ಧ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿ
- ನಬಾರ್ಡ್ ನಿಂದ 4.5% ಬಡ್ಡಿ ದರದರಲ್ಲಿ ಹಣ ಪಡರದು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ
- ಅನ್ಯಾಯ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ
- ಅನ್ಯಾಯವಾದರೂ ಬಾಯಿ ಬಿಡದ ರಾಜ್ಯದ ಸಚಿವರು
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಹಕಾರ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 2024-25ನೇ ಸಾಲಿಗೆ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. 2023-24ನೇ ಸಾಲಿಗೆ ಅಲ್ಪಾವಧಿ ಕೃಷಿ ಪತ್ತಿನ ಸಂಸ್ಥೆಗಳ ಮೂಲಕ 22,902 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿತ್ತು. ರಾಜ್ಯ ಅಪೆಕ್ಸ್ ಬ್ಯಾಂಕ್ 2024-25ನೇ ಸಾಲಿಗೆ 9162 ಕೋಟಿ ರೂ.ಗಳ ರಿಯಾಯಿತಿ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಮಂಜೂರು ಮಾಡಲು ಕೋರಲಾಗಿದೆ. ಆದರೆ, ನಬಾರ್ಡ್ ಪತ್ರದಲ್ಲಿ ಕರ್ನಾಟಕಕ್ಕೆ 2,340 ಕೋಟಿ ರೂ ಮಂಜೂರು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಬಾರ್ಡ್ ನಮಗೆ 4.5% ಬಡ್ಡಿ ದರದರಲ್ಲಿ ಹಣ ಕೊಡ್ತಿತ್ತು. ನಾವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದೆವು. 1200 ಕೋಟಿಯಷ್ಟು ಸರ್ಕಾರ ತುಂಬುತಿತ್ತು. ನಬಾರ್ಡ್ನಿಂದ 5600 ಕೋಟಿ ಬರುತಿತ್ತು. ಅದರ ಹಿಂದಿನ ವರ್ಷ 5400 ಕೋಟಿ ನೀಡಿದ್ದರು. ಈ ಬಾರಿ ನಾವು ನಬಾರ್ಡ್ಗೆ ಮನವಿ ಸಲ್ಲಿಸಿದ್ದು, 5600 ಕೋಟಿ ರೂ. ಆದರೆ, ಈ ಬಾರಿ 2,340 ಕೋಟಿ ರೂ. ಬಂದಿದೆ ಎಂದರು.
ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ;ಈ ಹಿನ್ನೆಲೆಯಲ್ಲಿ ರೈತರಿಗೆ ಇನ್ಮುಂದೆ ಸಾಲ ನೀಡುವುದು ಕಷ್ಟ. ಈ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗಿದೆ. ಸಂಸದರಿಗೂ ಮನವಿ ಮಾಡಿದ್ದೇವೆ. ಸಿಎಂ ಕೂಡ ಪತ್ರ ಬರೆದುದ್ದು ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದರು.
ಅನ್ಯಾಯವಾದರೂ ಬಾಯಿ ಬಿಡದ ಸಚಿವರು; ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿವೆ. ಇದಕ್ಕೆ ಬಲ ತುಂಬಲು ನಬಾರ್ಡ್ ಇದೆ. ಈ ಬಾರಿ ಕೇವಲ 2340 ಕೋಟಿ ಬಂದಿದೆ. ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರಿದ್ದಾರೆ. ರೈತರಪರ ಎನ್ನುವ ಕುಮಾರಸ್ವಾಮಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದರು.