ದಾವಣಗೆರೆ: ಸರ್ಕಾರದ ಮಾರ್ಗಸೂಚಿ ಅನ್ವಯ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್ಗೆ 2400 ರೂ ದರದಲ್ಲಿ ಖರೀದಿಸಲು ನಿರ್ಧರಿಸಿದೆ.
ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆ.ಜಿ. ಪ್ರಮಾಣದಷ್ಟು ಮೆಕ್ಕೆಜೋಳದ ಮಾದರಿಯನ್ನು ನೀಡಿ, FRUITS ತಂತ್ರಾಂಶದಲ್ಲಿ ನೋಂದಾವಣೆಯಾಗಿರುವ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಪ್ರಕ್ರಿಯೆಯು ನ.11 ರಿಂದ ಪ್ರಾರಂಭವಾಗುತ್ತಿದ್ದು, ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದಿರುತ್ತದೆ.
- ಕೆಎಂಎಫ್ ನಿಂದ ಕ್ವಿಂಟಲ್ ಗೆ 2,400 ರೂ.ಗೆ ಮೆಕ್ಕೆಜೋಳ ಖರೀದಿ
- ನ.11 ರಿಂದ ಖರೀದಿ ಪ್ರಾರಂಭ
- ಆಸಕ್ತ ರೈತರು ನೋಂದಣಿಗೆ ಸೂಚನೆ
ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರ್ಕಾರದ ಕೃಷಿ ಇಲಾಖೆ ಸಿದ್ದಪಡಿಸಿರುವ FRUITS ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಟಾನಕ್ಕೆ ತರುತ್ತಿದ್ದು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ಆಸಕ್ತ ರೈತರು, ತಮ್ಮ ಮೆಕ್ಕೆಜೋಳದ ಮಾದರಿಗಳನ್ನು ತಮ್ಮ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೀಡಬಹುದು.
ಪ್ರತಿ ಒಬ್ಬ ರೈತರಿಂದ ಗರಿಷ್ಟ 500 ಕ್ವಿಂಟಲ್ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದ್ದು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಡಾ.ಸೂರಜ್, ಸಹಾಯಕ ವ್ಯವಸ್ಥಾಪಕರು ಮೊ.ಸಂ: 9844346640 ಹಾಗೂ ನ್ಯಾಮತಿ ತಾಲ್ಲೂಕು ವ್ಯಾಪ್ತಿಗೆ ಸಂಬಂಧಪಟ್ಟಂತೆ ಹರೀಶ್ ಕರೇಗೌಡ, ಸಹಾಯಕ ವ್ಯವಸ್ಥಾಪಕರು ಮೊ.ಸಂ: 7399530405 ರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಹಾಮ ಪಶುಘಟಕ, ಶಿಕಾರಿಪುರ ಮೊ.ಸಂ: 9606012571 ನ್ನು ಸಂಪರ್ಕಿಸಬಹುದೆಂದು ಪ್ರಧಾನ ವ್ಯವಸ್ಥಾಪಕರು, ಕಹಾಮ ಪಶು ಆಹಾರ ಘಟಕ, ಶಿಕಾರಿಪುರ ಇವರು ತಿಳಿಸಿದ್ದಾರೆ.



