ಡಿವಿಜಿ ಸುದ್ದಿ, ಮೈಸೂರು: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ಒಟ್ಟು 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 14 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿದೆ. ಇನ್ನು ಜೆಡಿಎಸ್ 7, ಬಿಜೆಪಿ 3, ಎಸ್ಡಿಪಿಐ 2 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದಾರೆ.

ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್. ವಿಶ್ವನಾಥ್ ಸೋಲಿನ ನಂತರ ಬಿಜೆಪಿಗೆ ಹಣಸೂರಿನಲ್ಲಿ ಮತ್ತೆ ಮುಖಭಂಗ ಆಗಿದೆ. ಒಟ್ಟು 31 ವಾರ್ಡ್ ನಲ್ಲಿ 14 ಸ್ಥಾನ ಗೆದ್ದಿರುವ ಕಾಂಗ್ರೆಸ್ ಸರಳ ಬಹುಮತಕ್ಕೆ 2 ಸ್ಥಾನ ಮಾತ್ರ ಅವಶ್ಯಕತೆ ಇದ್ದು, ಇನ್ನು ಜೆಡಿಸ್ ಪ್ರಭಾವ ಕೂಡ ಹಣಸೂರು ನಗರ ಸಭೆಯಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಕೇವಲ 7 ಸ್ಥಾನದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಹಣ ಬಲದಿಂದ ಹುಣಸೂರು ನಗರಸಭೆ ಚುನಾವಣೆ ನಡೆಸಿದ್ದ ಬಿಜೆಪಿ, ಪ್ರತಿ ವಾರ್ಡಿಗೆ 50 ಲಕ್ಷ ಹಣ ಖರ್ಚು ಮಾಡಿತ್ತು. ಆದರೆ, ಹಣಕ್ಕೆ ಮನಸು ಮಾಡದ ಮತದಾರರು ಕಾಂಗ್ರೆಸ್ ಗೆ ಮತದಾನ ಮಾಡಿದ್ದಾರೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದು, ಅಧಿಕಾರ ಹಿಡಿಯಲು ಯಾರನ್ನು ಮನವೊಲಿಸಲು ಹೋಗೋಲ್ಲ. ಮನವೊಲಿಕೆ ಮಾಡೋದು ತಮಾಷೆಯ ವಿಚಾರ ಅಲ್ಲ. ಯಾರು ಬೇಷರತ್ ಬೆಂಬಲ ಕೊಡುತ್ತಾರೆ ಅಂತವರನ್ನ ಸೇರಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಹುಣಸೂರು ನಗರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಮಾಧಾನಕರ ಸಾಧನೆ ಮಾಡಿದೆ. ಜಿಟಿ ದೇವೇಗೌಡ ಹಾಗೂ ಚಿಕ್ಕಮಾದು ಅವರು ಇದ್ದಾಗಲೇ 9 ಸ್ಥಾನ ಗೆದ್ದಿದ್ದೇವು. ಈಗ ಯಾವ ನಾಯಕರು ಇಲ್ಲದೆ 7 ಸ್ಥಾನ ಗೆದ್ದಿದ್ದೇವೆ. ಉಪಚುನಾವಣೆ ಮತಗಳಿಗೂ ನಗರಸಭೆ ಚುನಾವಣೆಗು ವ್ಯತ್ಯಾಸ ಇದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ. ಪಕ್ಷೇತರರ ಸಹಾಯ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.



