ದಾವಣಗೆರೆ; ಕೇಂದ್ರ ಬುಡಕಟ್ಟು ಮಂತ್ರಾಲಯದಿಂದ ಅಕ್ಟೋಬರ್ 2 ರಂದು ಪ್ರಧಾನಮಂತ್ರಿ ಜನಜಾತಿಯ ಉನ್ನತಿ ಗ್ರಾಮ ಅಭಿಯಾನ ಯೋಜನೆಯನ್ನು ಘೋಷಿಸಲಿದ್ದು, ಜಿಲ್ಲೆಯ 44 ಗ್ರಾಮಗಳು ಈ ಯೋಜನೆಯಡಿ ಆಯ್ಕೆಯಾಗಲಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಆಯ್ಕೆಯಾದ ಗ್ರಾಮಗಳಲ್ಲಿ ದಾವಣಗೆರೆ ತಾ; 7 ಗ್ರಾಮಗಳು, ಜಗಳೂರು ತಾಲ್ಲೂಕಿನ 24 ಗ್ರಾಮಗಳು. ನ್ಯಾಮತಿ ತಾಲ್ಲೂಕಿನ 1 ಗ್ರಾಮ, ಹೊನ್ನಾಳಿಯ 1 ಗ್ರಾಮ, ಚನ್ನಗಿರಿ ತಾಲ್ಲೂಕಿನ 9 ಗ್ರಾಮ. ಹರಿಹರ ತಾಲ್ಲೂಕಿನ 2 ಗ್ರಾಮಗಳು ಸೇರಿವೆ.
ಈ ಯೋಜನೆಯಲ್ಲಿ ರೂ.8.05 ಲಕ್ಷ ಪರಿಶಿಷ್ಟ ಪಂಗಡದ ಜನರಿಗೆ ಉಪಯೋಗವಾಗುವಂತಹ ವಿವಿಧ 17 ಇಲಾಖೆಗಳು, 25 ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ. ಪರಿಶಿಷ್ಟ ಪಂಗಡದ ಜನರು ಹೆಚ್ಚು ವಾಸಿಸುವ ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆಯಾದ ಗ್ರಾಮಗಳಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುದೀಕರಣ, ಮನೆ ನಿರ್ಮಾಣ, ಆರೋಗ್ಯ ಯೋಜನೆಗಳ ಅನುಷ್ಠಾನ, ಪರಿಶಿಷ್ಟ ವರ್ಗದವರಿಗೆ ಶಿಕ್ಷಣ, ಸೋಲಾರ್ ವ್ಯವಸ್ಥೆ, ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅನುಷ್ಠಾನ ಮತ್ತು ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ಮುಂತಾದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ.



