ದಾವಣಗೆರೆ: 6.10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣವಿದ್ದ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟು ಹೋದ ಮಹಿಳೆಗೆ ಪ್ರಮಾಣಿಕವಾಗಿ ವಾಪಸ್ ನೀಡಿದ ಆಟೋ ಡ್ರೈವರ್ ಗೆ ಪೊಲೀಸರು ಸನ್ಮಾನಿಸಿದ್ದಾರೆ.
ಹರಿಹರದ ಹಳ್ಳದಕೇರಿ ನಿವಾಸಿ ನವೀನತಾಜ್ ಎಂಬ ಗೃಹಿಣಿ ಸೆ. 10ರಂದು ಮಧ್ಯಾಹ್ನ ಸುಮಾರು 12-00 ಗಂಟೆಗೆ ದಾವಣಗೆರೆ ನಗರದ ಬಾಷಾನಗರ ಆರ್ಚ್ ಬಳಿಯಿಂದ ತನ್ನ ಅತ್ತೆ ಮತ್ತು ಸಹೋದರಿಯೊಂದಿಗೆ ಆಟೋ ಹತ್ತಿಕೊಂಡು ಇಸ್ಲಾಂಪೇಟೆ ಮಸೀದಿ ಹತ್ತಿರ ಬಂದಿದ್ದು, ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದರು.
ಬ್ಯಾಗ್ ನಲ್ಲಿ 1) ಬಂಗಾರದ ಒಂದು ನೆಕ್ಲೆಸ್, 2) ಬಂಗಾರದ ಒಂದು ಲಾಂಗ್ ನೆಕ್ಲೆಸ್, 3) ಬಂಗಾರದ ಒಂದು ಲಾಂಗ್ ನೆಕ್ಲೆಸ್, 4) ಒಂದು ಜೊತೆ ಕಿವಿಯ ಜಬ್ಕಾ, 5) 3 ಉಂಗುರಗಳು ಅಂದಾಜು ಒಟ್ಟು 6 ಲಕ್ಷ ಬೆಲೆ ಬಾಳುವ ಸುಮಾರು 100 ಗ್ರಾಂ ಬಂಗಾರದ ಆಭರಣಗಳು ಮತ್ತು 10 ಸಾವಿರ ಬೆಲೆ ಬಾಳುವ 150 ಗ್ರಾಂ ಬೆಳ್ಳಿಯ ಸೊಂಟದ ಚೈನ್ ಇತ್ತು.
ಒಡವೆಗಳ ವೆನಿಟಿ ಬ್ಯಾಗ್ ಇಲ್ಲವೆಂದು ಗೊತ್ತಾದ ತಕ್ಷಣ ಬಸವನಗರ ಪೊಲೀಸ್ ಠಾಣೆಗೆ ಬಂದು ಮಾಹಿತಿ ತಿಳಿಸಿದ ಮೇರೆಗೆ ಕೂಡಲೇ ಆಟೋ ಪತ್ತೆ ಮಾಡಲು ಬಸವನಗರ ಠಾಣೆಯ ಅಪರಾಧ ಸಿಬ್ಬಂದಿ ನೇಮಕ ಮಾಡಲಾಗಿತ್ತು.ನವೀನತಾಜ್ ನೀಡಿದ ಮಾಹಿತಿ ಮೇರೆಗೆ ಆಟೋ ಹತ್ತಿದ ಮತ್ತು ಇಳಿದ ಸ್ಥಳದ ಬಳಿ ಇರುವ ಸಾರ್ವಜನಿಕರ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾತು. ಆಗ ಬಾಷಾನಗರ ಆರ್ಚ ಹತ್ತಿರ 5ನೇ ಕ್ರಾಸ್ ಬಳಿ ಬೇಕರಿಯ ಸಿಸಿಟಿವಿಯಲ್ಲಿ ಆಟೋದಲ್ಲಿ ಹತ್ತಿಕೊಂಡು ಹೋಗಿದ್ದು ಕಂಡುಬಂದಿದ್ದು, ಈ ಆಟೋ ಸದ್ದಾಂ ಅವರ KA17AA 5789 ಆಗಿರುತ್ತದ ಎಂದು ಪತ್ತೆಮಾಡಲಾಗಿತ್ತು.
ನಂತರ ಆಟೋ ಚಾಲಕ ಸದ್ದಾಂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆಭರಣಗಳು ಇರುವ ವೆನಿಟಿ ಬ್ಯಾಗನ್ನು ಪ್ರಾಮಾಣಿಕವಾಗಿ ವಾಪಸ್ಸು ಕೊಟ್ಟಿದ್ದಾರೆ. ಈ ವೇಳೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನಿಸಲಾಯಿತು. ಈ ಪತ್ತೆ ಕಾರ್ಯವನ್ನು ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜ ಮಾರ್ಗದರ್ಶನದಲ್ಲಿ ಸಿಬ್ಬಂದಿ ಫಕೃದ್ದೀನ್ ಅಲಿ, ಸುರೇಶ ಪತ್ತೆ ಕಾರ್ಯವನ್ನು ಕೈಗೊಂಡು ಆಭರಣಗಳನ್ನು ಪತ್ತೆಮಾಡಿಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಪೊಲೀಸ್ ಸಿಬ್ಬಂದಿಯವರ ಪತ್ತೆ ಕಾರ್ಯವನ್ನು ಪೊಲೀಸ್ ಉಪಾಧೀಕ್ಷಕರು ದಾವಣಗೆರೆ ಉಪ-ವಿಭಾಗ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಮತ್ತು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.



