ಡಿವಿಜಿ ಸುದ್ದಿ, ಬೆಂಗಳೂರು: ಅನರ್ಹ ಶಾಸಕರು ಅರ್ಹ ಶಾಸಕರಾಗಿದ್ದೇವೆ. ಸುಪ್ರೀಂ ಕೋರ್ಟ್, ಜನತಾ ನ್ಯಾಯಾಲಯ, ಎರಡರಲ್ಲೂ ಗೆದ್ದಿದ್ದೇವೆ. ಈಗಿರುವಾಗ ನಮ್ಮನ್ನು ಅನರ್ಹರು ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ವಕೀಲರೀ..! ಬಹುಶಃ ಕಾನೂನು ಪದವಿಯ ಫೇಕ್ ಸರ್ಟಿಫಿಕೆಟ್ ತಂದು ವಕೀಲ ವೃತ್ತಿ ಮಾಡಿರಬಹುದು ಎಂದು ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಸಲ ಕೇವಲ 500 ವೋಟ್ ನಲ್ಲಿ ಗೆದ್ದಿದ್ದ ನನ್ನನ್ನು ಕ್ಷೇತ್ರದ ಜನರು 30 ಸಾವಿರ ವೋಟ್ ನಲ್ಲಿ ಗೆಲ್ಲಿಸಿ ಕಳುಹಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿಯೂ ಸಹ ಅನರ್ಹತೆ ವಿರುದ್ಧ ಗೆದ್ದಿದ್ದೇವೆ . ಎರಡೂ ನ್ಯಾಯಾಲಯದಲ್ಲಿ ಗೆದ್ದಿರುವ ನಮ್ಮನ್ನು ಅನರ್ಹರು ಎನ್ನುವ ಸಿದ್ದರಾಮಯ್ಯ ಯಾವ ಕಾನೂನು ನಂಬುತ್ತಾರೆ. ಅವರು ಫೇಕ್ ಸರ್ಟಿಫಿಕೆಟ್ ತಂದು ವಲಕೀಲರಾಗಿರಬೇಕು ಎಂದು ಟಾಂಗ್ ಕೊಟ್ಟರು.
ಕುಮಾರಸ್ವಾಮಿ ಲಾಟ್ರಿ ಸಿಎಂ
ಇನ್ನು ನೂತನ ಸಚಿವರನ್ನು ಕುಟುಕಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತಗೆದುಕೊಂಡ ಬಿ.ಸಿ ಪಾಟೀಲ್, ಕುಮಾರ ಸ್ವಾಮಿ ಲಾಟ್ರಿ ಸಿಎಂ. 10 ವರ್ಷಕ್ಕೊಮ್ಮೆ ಅವರಿಗೆ ಲಾಟ್ರಿ ಹೊಡೆಯುತ್ತದೆ. ಆ ಸರ್ಕಾರವನ್ನು ಒಂದುವರೆ ವರ್ಷ ಸರ್ಕಾರ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ.
ಆಕಾಸ್ಮಿಕವಾಗಿ ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಅವರು, ಬಿಜೆಪಿ ಶಾಸಕರ ಬಗ್ಗೆ ಯಾಕೆ ಯೋಚನೆ ಮಾಡಬೇಕು. ಅವರ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವುದರ ಕಡೆ ಗಮನಹರಿಸಲಿ. ಉಳಿಸಿಕೊಳ್ಳುವುದಕ್ಕೆ ಆಗದಿದ್ದರೆ, ನೀವು ಕೂಡ ಬಿಜೆಪಿಗೆ ಬರ್ತಿನಿ ಅಂದ್ರೆ ನಾನೇ ಮುಂದು ನಿಂತು ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದರು.



