ದಾವಣಗೆರೆ: ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿದೆ. ಜಿಲ್ಲೆಯ ಹೊನ್ನಾಳಿ, ಹರಿಹರದಲ್ಲಿ ಹಾಯ್ದು ಹೋಗುವ ತುಂಗಭದ್ರಾ ನದಿ ಉಕ್ಕಿ ಹರಿಯುತ್ತದೆ. ನದಿ ಪಾತ್ರದಲ್ಲಿ ಸಾರ್ವಜನಿಕರು, ದನಕರು ಇಳಿಸದಂತೆ ನೀರಾವರಿ ಇಲಾಖೆ ಆದೇಶ ಹೊರಡಿಸಿದ್ದರೂ, ನದಿಗಿಳಿದು ದನ ಮೈ ತೊಳೆಯಲು ಹೋದ ಯುವಕನೊಬ್ಬ ನೀರಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ
ಇಂಗಳಗೊಂದಿ ಜಯಪ್ಪ (32) ನದಿಪಾಲಾದವರು. ದಾವಣಗೆರೆಯ ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ಬಳಿಯ ತುಂಗಭದ್ರ ನದಿ ಪಾತ್ರದಲ್ಲಿ ಈ ಘಟನೆ ನಡೆದಿದೆ. ಜಯಪ್ಪ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದನ್ನು ಗಮನಿಸದೆ, ಏಕಾಏಕಿ ಇಳಿದಿದ್ದ. ನದಿಗಿಳಿದು ಜಾನುವಾರುಗಳ ಮೈ ತೊಳೆಯಲು ಮುಂದಾಗಿದ್ದಾಗ, ಇದ್ದಕ್ಕಿದಂತೆ ನೀರಿನ ಸೆಳೆತಕ್ಕೆ ಒಳಗಾಗಿ ನದಿ ಪಾಲಾಗಿದ್ದಾನೆ.
ದೂಳೆಹೊಳೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.



