ದಾವಣಗೆರೆ: ಕೆಲಸದ ಆಸೆ ತೋರಿಸಿ 1ಲಕ್ಷಕ್ಕೆ ಮಹಿಳೆ ಮಾರಾಟ ಮಾಡಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರದ ಮನೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹೊನ್ನಾಳಿ ತಾಲೂಕಿನ ಗ್ರಾಮವೊಂದರ 30 ವರ್ಷದ ಮಹಿಳೆಯ ಪತಿ ಮರಣ ನಂತರ ಸಹೋದರನ ಮನೆಯಲ್ಲಿದ್ದರು.
ಭದ್ರಾವತಿಯ ರೋಜಿಲೀನಾ ಎಂಬುವರು ಮೇ 12 ರಂದು ಆ ಮಹಿಳೆಯನ್ನು ಕಲ್ಯಾಣ ಮಂಟಪದಲ್ಲಿ ಕೆಲಸಕ್ಕೆ ಕರೆದೊಯ್ದಿದ್ದರು. ಮೇ 12 ರಂದು ರೋಜಿಲೀನಾ ಜೊತೆಗೆ ಬಂದಿದ್ದ ಭದ್ರಾವತಿಯ ಮಲ್ಲಿಕಾರ್ಜುನ್, ಲೋಕೇಶ್ ಎಂಬುವರು ಮಹಿಳೆಯನ್ನು ಕಲ್ಯಾಣ ಮಂಪಟದಲ್ಲಿನ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು. ಅಂದಿನಿಂದ ಮಹಿಳೆ ಮನೆಗೆ ವಾಪಾಸ್ ಆಗಿರಲಿಲ್ಲ.ಎರಡು-ಮೂರು ದಿನಗಳ ನಂತರ ಮಹಿಳೆ ತನ್ನ ಸಹೋದರಿಗೆ ಫೋನ್ ಮಾಡಿ, ಸೊಲ್ಲಾಪುರದ ಮನೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಬಂದ ರೋಜಿಲೀನಾ, ಮಲ್ಲಿಕಾರ್ಜುನ್, ಲೋಕೇಶ್ ಒಂದು ಲಕ್ಷ ರೂಪಾಯಿಗೆ ನನ್ನನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳೆಯ ಸಹೋದರಿ ಆ ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಒಂದು ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಅಕ್ಕನನ್ನು ಬಿಟ್ಟು ಕಳಿಸುವುದಾಗಿ ತಿಳಿಸಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂಪಾಯಿಗೆ ಅಕ್ಕನನ್ನು ಮಾರಾಟ ಮಾಡಿರುವ ಭದ್ರಾವತಿಯ ರೋಜಿಲೀನಾ, ಮಲ್ಲಿಕಾರ್ಜುನ್, ಲೋಕೇಶ್ ವಿರುದ್ಧ ಸಹೋದರ ದುರ್ಗಪ್ಪ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.



