ದಾವಣಗೆರೆ: 2014ರ ಲೋಕಸಭೆ ಚುನಾವಣೆಯಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ಗೆ ಓಡಿ ಹೋಗಿದ್ದ ಸ್ನೇಹಿತ ಶಾಸಕ ಬಿ.ಪಿ. ಹರೀಶ್ ನಿಂದ ನೀತಿ ಪಾಠ ಕಲಿಯುವ ಅಗತ್ಯವಿಲ್ಲಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್. ಅವರ ಮನೆಗೆ ಭೇಟಿ ನೀಡಿದರೆ ಅದಕ್ಕೂ ಟೀಕಿಸುತ್ತಾರೆ. ರಾತ್ರೋರಾತ್ರಿ ಹೋಗಿ ಕಾಂಗ್ರೆಸ್ ಸೇರಿದ್ದವರಿಂದ ನೀತಿ ಪಾಠ ನಾನು ಕಲಿಯಬೇಕಿಲ್ಲ. ನನ್ನ ಬಗ್ಗೆ ಮಾತನಾಡುವ ನೈತಿಕತೆಯಾದರೂ ಬಿ.ಪಿ.ಹರೀಶ್ ಗೆ ಇಲ್ಲ.
ನಾನು ಯಾರದ್ದೋ ಕಾಲಿಗೆ ಬಿದ್ದು ಬಿ ಫಾರಂ ಪಡೆದಿದ್ದಾಗಿ ಹೇಳಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಕಾಲಿಗೆ ಬೀಳುವ ಜಾಯಮಾನವು ನನ್ನದಲ್ಲ. ನನಗೆ ಯಡಿಯೂರಪ್ಪನವರು, ಸಂಘಟನೆ, ವರಿಷ್ಠರು ಬಿ ಫಾರಂ ಕೊಟ್ಟಿದ್ದಾರೆಯೇ ಹೊರತು, ದಾವಣಗೆರೆ ಜಿಲ್ಲೆಯವರಲ್ಲ ಎಂದು ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿರುದ್ಧ ಕಿಡಿಕಾರಿದರು.
ನಾನು ಅಧಿಕಾರದಲ್ಲಿದ್ದಾಗ ಬಿ.ಪಿ.ಹರೀಶ್ರ ಎಲ್ಲಾ ಕೆಲಸ, ಕಾರ್ಯಗಳ ಸರ್ಕಾರದ ಮಟ್ಟದಲ್ಲಿ ಮಾಡಿಸಿಕೊಟ್ಟಿದ್ದೇನೆ ಎಂದರು. ದಾವಣಗೆರೆ ಲೋಕಸಭಾ ಸದಸ್ಯರ ಹಠಾವೋ ಅಂದಿದ್ದು ನಾನಲ್ಲ. ಕಾಂಗ್ರೆಸ್ಸಿನವರು ಈ ಮಾತುಗಳನ್ನಾಡಿದ್ದಾರೆ. ಇದೇ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಸಿದ್ದೇಶ್ವರ ಸ್ಪರ್ಧೆ ಮಾಡುವುದು ಬೇಡ. ಸೋಲುತ್ತೀರಿ ಎಂಬುದಾಗಿ ಹೇಳಿದ್ದನ್ನೇ ಮರೆತಂತಿದೆ. ಮೊನ್ನೆ ಮೊನ್ನೆವರೆಗೆ ಲೋಕಸಭಾ ಸದಸ್ಯ ಸಿದ್ದೇಶ್ವರ, ಪಕ್ಷದ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದವರು ಈಗ ದಿಢೀರನೇ ಸಿದ್ದೇಶ್ವರರ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿದ್ದು ಹೊನ್ನಾಳಿ-ನ್ಯಾಮತಿ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ. ಹಿಂದೆ ಬಿಜೆಪಿ ಸರ್ಕಾರದಲ್ಲಿ ತಂದಿದ್ದ 1300 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಅವುಗಳ ಪೈಕಿ ಅನೇಕ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಅವುಗಳಿಗೆ ತಡೆ ಹಿಡಿದ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೆನೇ ಹೊರತು, ನಾನು ತಲೆಗೆ ಟವಲು ಹಾಕಿಕೊಂಡು, ಕದ್ದು ಮುಚ್ಚಿ ಯಾರನ್ನೂ ಭೇಟಿಯಾಗಿಲ್ಲ. ಬಹಿರಂಗವಾಗಿಯೇ ಭೇಟಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುವುದಕ್ಕಲ್ಲ ಎಂದರು.
ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಕೆ.ಜಿ.ಸುರೇಶ, ಎಸ್ಓಜಿ ಕಾಲನಿ ಹನುಮಂತಪ್ಪ, ಕೆ.ಎಸ್.ಮೋಹನಕುಮಾರ, ಅಣಜಿ ಬಸವರಾಜ, ಪಿ.ಎಸ್.ರಾಜು ವೀರಣ್ಣ, ಚೇತನಾ ಬಾಯಿ ಇತರರಿದ್ದರು.



