ದಾವಣಗೆರೆ; ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಬೆಂಬಲಿಸಿದ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಈಗ ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಸ್ವಾಮೀಜಿಗಳು ಈ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಲಿ. ಜೊತೆಗೆ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಒಗ್ಗಟ್ಟಾಗಬೇಕು ಎಂದು ಮಾಜಿ ಸಿಎಂ, ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಕರೆ ನೀಡಿದ್ದಾರೆ.
ವೀರಶೈವ ಲಿಂಗಾಯತ ಅಧಿವೇಶನದಲ್ಲಿ ಮಾತನಾಡಿ, ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ನಾವೆಲ್ಲರೂ ಹೋರಾಟ ಮಾಡೋಣ. ಸ್ವಾಮೀಜಿಗಳು ಈ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಲಿ. ವೀರಶೈವ- ಲಿಂಗಾಯತ ಸ್ವತಂತ್ರ್ಯ ಧರ್ಮ ಆಗಲಿ. ವೀರಶೈವ- ಲಿಂಗಾಯತ ಬೇರೆ ಬೇರೆ ಅನ್ನೋದು ಬಿಡಿ. ಎಲ್ಲಾ ಸಮಾಜ ಕೂಡಿ, ಗಟ್ಟಿಯಾಗಿ ನಿರ್ಧಾರ ಮಾಡಿ. ಗುರು ವಿರಕ್ತರನ್ನ ಒಂದೆಡೆ ಸೇರಿಸಿ, ಗಟ್ಟಿಯಾಗಿ ಹೋರಾಟ ಮಾಡಿದರೆ ಪ್ರತ್ಯೇಕ ಧರ್ಮ ಆಗೇ ಆಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಸ್ವತಂತ್ರ ಧರ್ಮದ ಹೆಸರಲ್ಲಿ ಸಮಾಜ ಒಡೆದು ಹೋಗುತ್ತದೆ ಎಂಬ ಭಯ ಉಂಟಾಗಿತ್ತು. ವೀರಶೈವ, ಲಿಂಗಾಯತ ಬೇರೆ ಮಾಡಲು ಹೊರಟಿದ್ದರು. ಯಾವುದೇ ಕಾರಣಕ್ಕೂ ಸಮುದಾಯ ಒಡೆಯಲು ಬಿಡುವುದಿಲ್ಲ ಎಂದು ಆಗ ಮಹಾಸಭಾ ಗಟ್ಟಿ ನಿರ್ಧಾರ ಮಾಡಿತ್ತು. ಹೀಗಾಗಿಯೇ ಇಂದು ಸಮಾಜ ಒಂದಾಗಿದೆ ಎಂದು ಹೇಳಿದರು.
ಸಮಾಜ, ಗುರು- ವೀರಕ್ತರು ಒಂದಾದರೆ ಇಡೀ ಸಮುದಾಯವೇ ನಿಮ್ಮ ಹಿಂದೆ ಇರುತ್ತದೆ. ನಿಮ್ಮ ಮಾರ್ಗದರ್ಶನದಲ್ಲಿ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಹಲವು ರಾಜ್ಯಗಳಲ್ಲಿ ಸಮುದಾಯದ ಜನರಿದ್ದಾರೆ. ಆದರೆ ಕರ್ನಾಟಕದಲ್ಲಿ ನಮ್ಮ ಸಮಾಜ ಬಹಳ ಬಲಾಢ್ಯವಾಗಿದೆ. ಹೀಗಾಗಿ ಸಮುದಾಯಕ್ಕೆ ಕೇಂದ್ರ OBC ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಸಿಗಬೇಕು. ಈ ಒತ್ತಾಯ ಇದೆ ಬಹಳ ವರ್ಷಗಳಿಂದ ಇದೆ. ಇದು ನೆರವೇರಿದರೆ ಸಮುದಾಯದ ಯುವಕರಿಗೆ ಭವಿಷ್ಯದಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಾತಿಗಣತಿ ಲೋಪ ಇರುವ ವರದಿಯನ್ನು ರದ್ದು ಮಾಡಿ, ಹೊಸದಾಗಿ ವೈಜ್ಞಾನಿಕವಾಗಿ ಜಾತಿಗಣತಿಯಾಗಲಿ. ಈ ವಿಚಾರವಾಗಿ ಸರ್ಕಾರಕ್ಕೆ ನಾವು ಒತ್ತಾಯ ಮಾಡಬೇಕಾಗಿದೆ. ಸಮುದಾಯ ಮತ್ತಷ್ಟು ಬೆಳೆಯಬೇಕೆಂದರೆ ಒಳಪಂಗಡಗಳ ನಡುವಿನ ಸಂಬಂಧ ವೃದ್ಧಿಸಬೇಕು ಎಂದು ಹೇಳಿದರು.



