ದಾವಣಗೆರೆ: ಯಾವುದೋ ಧರ್ಮವನ್ನು ಅತಿಯಾಗಿ ಓಲೈಕೆ, ತುಷ್ಟೀಕರಣ ಮಾಡದೆ ಎಲ್ಲರಿಗೂ ಅನುದಾನ ಕೊಡಬೇಕು. ಜೊತೆಗೆ ವೀರಶೈವ ಲಿಂಗಾಯತ ಸಮುದಾಯ ಅಧಿಕಾರಿಗಳಿಗೆ ಸೂಕ್ತ ಸ್ಥಾನ ನೀಡಿಮಾಜಿ ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾ ಸಭಾ 24 ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿ, ಇತ್ತೀಚೆಗೆ ಸಮಾಜದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತದೆ. ಅವಕಾಶ ಸಿಕ್ಕಾಗ ಸಮಾಜದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲಿರುವ ಸಚಿವರು ನಮ್ಮ ವೀರಶೈವ – ಲಿಂಗಾಯತ ಸಮುದಾಯ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ಯಾವುದೇ ಧರ್ಮಗಳನ್ನು ಅತಿಯಾಗಿ ಓಲೈಸದೆ, ತುಷ್ಟೀಕರಣ ಮಾಡದೆ ಎಲ್ಲರಿಗೂ ಸಮಾನ ಅನುದಾನ ಕೊಡಬೇಕು ಎಂದು ತಾಕೀತು ಮಾಡಿದರು.
ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮಾಜವನ್ನು ಒಂದುಗೂಡಿಸಬೇಕು. ನಾವು ಒಟ್ಟಾದರೆ ನಮಗೆ ಭವಿಷ್ಯ ಇದೆ ಎಂದು ಕಾರ್ಯಕ್ರಮ ಮಾಡಿದ್ದಾರೆ. ಒಳಪಂಗಡಗಳ ಗುದ್ದಾಟದಿಂದ ಹೊರ ಬಂದು ಒಂದಾದರೆ ಕಾರ್ಯಕ್ರಮವು ಸಾರ್ಥಕವಾಗುತ್ತದೆ. ನಮ್ಮಲ್ಲಿ ಶಕ್ತಿ ಇದೆ. ಇತರೆ ಸಮುದಾಯಗಳನ್ನು ಜತೆಗೆ ತೆಗೆದುಕೊಂಡು ಹೋದರೆ ದೊಡ್ಡ ಶಕ್ತಿ ಹೊರ ಹೊಮ್ಮುತ್ತದೆ. ವೀರಶೈವ ಲಿಂಗಾಯತರನ್ನ ಒಬಿಸಿ ಪಟ್ಟಿಗೆ ಸೇರಿಸುವುದು ಬಹಳ ದಿನಗಳ ಹೋರಾಟವಾಗಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ಕೊಡುತ್ತಿದ್ದೇನೆ ಎಂದರು.
ಶಾಸಕ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಈಶ್ವರ್ ಖಂಡ್ರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಜ್ಜಯಿನಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್.ಡಿ. ತಮ್ಮಯ್ಯ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.



