ಬೆಂಗಳೂರು: ಡಿಸೆಂಬರ್ 31ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಕಡ್ಡಾಯ. ಇಲ್ಲವಾದಲ್ಲಿ ಗೃಹಬಳಕೆ ಸಿಲಿಂಡರ್ ದರ, ಕಮರ್ಷಿಯಲ್ ದರವಾಗಿ ಬದಲಾಗಲಿದ್ದು, ಸಿಲಿಂಡರ್ ಬೆಲೆ 903 ರೂ. ರಿಂದ 1400 ರೂ ಆಗಲಿದೆ ಎಂಬ ಸುದ್ದಿ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ನೋಡುತ್ತಿದ್ದಂತೆ ಗ್ರಾಹಕರು ಕೆವೈಸಿ ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಮುಗಿಬಿದ್ದಿದ್ದಾರೆ.
ಡಿಸೆಂಬರ್ 31ರೊಳಗೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೆದುಕೊಂಡು ತಮ್ಮ ಗ್ಯಾಸ್ ನೀಡಿರುವ ಏಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಆಗ ಮಾತ್ರ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903ರಿಂದ 500 ರೂಗೆ ಸಿಗುತ್ತದೆ. ಒಂದು ವೇಳೆ KYC ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಎಲ್ಲಾ ಗ್ರಾಹಕರಿಗೂ ಅನ್ವಯವಾಗುವುದಿಲ್ಲ ಎಂಬುದು ಏಜೆನ್ಸಿಗಳು ಸ್ಪಷ್ಟಪಡಿಸಿವೆ. ಇದು ಉಜ್ವಲ ಯೋಜನೆ ಗ್ರಾಹಕರಿಗೆ ಮಾತ್ರ ಅನ್ವಯ ಎಂಬುದು ಗೊತ್ತಾಗಿದೆ.
ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು KYC ಮಾಡಿಸಬೇಕಾದ ಅಗತ್ಯವಿಲ್ಲ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಕಮರ್ಷಿಯಲ್ ಆಗಿ ಬದಲಾಗುತ್ತದೆ ಎಂಬುದು ಸುಳ್ಳು. ಅಂತವರು ಗೃಹಬಳಕೆಯ ಗ್ರಾಹಕರಾಗಿಯೇ ಮುಂದುವರೆಯುತ್ತಾರೆ. ಅವರಿಗೆ ಸಿಗುತ್ತಿರುವ ಸಣ್ಣಪುಟ್ಟ ಸಬ್ಸಿಡಿ ನಿಂತುಹೋಗಬಹುದು ಅಷ್ಟೇ…
ಇನ್ನು ಈ ಬಗ್ಗೆ ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಕೂಡ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಾಟ್ಸಪ್ ಸಂದೇಶದಲ್ಲಿ ಹುರುಳಿಲ್ಲ. ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಅವರು ಮಾತ್ರ ಆಧಾರ ದೃಢೀಕರಿಸಬೇಕು. ಹಾಗಾಗಿ ಉಳಿದ ಗ್ರಾಹಕರು ಗೊಂದಲಕ್ಕೊಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರೊಳಗೆ ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ KYC ಮಾಡಿಸಿದರೆ ಅವರಿಗೆ ಸಬ್ಸಿಡಿ ಮುಂದುವರೆಯುತ್ತದೆ. ಉಳಿದ ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ.