ದಾವಣಗೆರೆ: ಮಲಮಗಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ-1ನೇ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹ 22,000 ದಂಡ ವಿಧಿಸಿದೆ.
ಬಾಗಲಕೋಟೆಯ ವ್ಯಕ್ತಿ, ಸಂತ್ರಸ್ತ ಬಾಲಕಿಯ ತಾಯಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆ ಬಳಿಕ ಅವರ ಜೊತೆಗೆ ದಾವಣಗೆರೆ ನಗರದಲ್ಲಿ ನೆಲೆಸಿದ್ದ. ಒಂದೂವರೆ ವರ್ಷದ ಹಿಂದೆ ಮನೆಯಲ್ಲಿ ಯಾರೂ ಇಲ್ಲದಾಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ವಿಷಯ ಗೊತ್ತಾಗಿ ತಾಯಿಯು ಬಾಲಕಿಗೆ ಬೇರೊಬ್ಬರೊಂದಿಗೆ ವಿವಾಹ ಮಾಡಲು ಮುಂದಾಗಿದ್ದರು.
ಇದನ್ನು ಅರಿತ ಆರೋಪಿಯು ಸಂತ್ರಸ್ತೆಯನ್ನು ಪುಸಲಾಯಿಸಿ ಬೇರೊಂದು ಗ್ರಾಮಕ್ಕೆ ಕರೆದೊಯ್ದು ಹಲವು ಬಾರಿ ಅತ್ಯಾಚಾರ ಎಸಗಿದ್ದ. ಗರ್ಭಿಣಿಯಾದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.ಮಗಳು ಕಾಣೆಯಾಗಿರುವುದಾಗಿ ತಾಯಿ, ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಯು.ನಾಗೇಶ್ ಐತಾಳ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ-1ನೇ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ ಎನ್. ಅವರು ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಜನಿಸಿದ ಮಗುವಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ. ವಾದ ಮಂಡಿಸಿದ್ದರು.



